ಪುತ್ತೂರು : ಮನೆ ಮಂದಿಯನ್ನು ಕಟ್ಟಿ ಹಾಕಿದ ತಂಡವೊಂದು ದರೋಡೆ ಮಾಡಿದ ಘಟನೆ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಗುರುಪ್ರಸಾದ್ ರೈ ಎಂಬವರಿಗೆ ಸೇರಿದ ಮನೆ ಇದಾಗಿದ್ದು. ಮನೆಯಲ್ಲಿ ಗುರುಪ್ರಸಾದ್ ಮತ್ತು ಅವರ ತಾಯಿ ಇದ್ದ ಸಂದರ್ಭದಲ್ಲಿಯೇ ನಸುಕಿನ ಜಾವ 2 ಗಂಟೆ ಸುಮಾರಿಗೆ ಮನೆಯ ಮುಂದಿನ ಬಾಗಿಲು ಮುರಿದು ನುಗ್ಗಿದ ಸುಮಾರು 8 ಜನರಿದ್ದ ದರೋಡೆಕೋರರ ತಂಡ, ಗುರುಪ್ರಸಾದ್ ಕುತ್ತಿಗೆಗೆ ಚಾಕು ಹಿಡಿದು 40 ಸಾವಿರ ನಗದು ಮತ್ತು ಸುಮಾರು 120 ಗ್ರಾಂ ಚಿನ್ನವನ್ನು ದರೋಡೆ ಮಾಡಿದ್ದಾರೆ.
ಇವರು ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ಗುರುಪ್ರಸಾದ್ ರೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ, ಬೆರಳಚ್ಚು ಮತ್ತು ಶ್ವಾನದಳ ಭೇಟಿ ನಡೆಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹಾಗೂ ಪುತ್ತೂರು ಡಿವೈಎಸ್ಪಿ ಗಾನ.ಪಿ.ಕುಮಾರ್ ಭೇಟಿ ನೀಡಿದ್ದಾರೆ.