ಪುತ್ತೂರು: ಮಾ .24 ರ ರಾತ್ರಿ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗೆ ನುಗ್ಗಿದ ಕಳ್ಳರು ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ, ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿರುವ ಘಟನೆ ಮಾ.25 ರಂದು ಬೆಳಕಿಗೆ ಬಂದಿದೆ.
ಪುತ್ತೂರಿನ ಹೃದಯ ಭಾಗದಲ್ಲಿರುವ ಪುತ್ತೂರು ನಗರ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿಯ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿರುವುದು. ಪುತ್ತೂರು ನಗರ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಯಿಂದ ಕಳ್ಳತನ ನಡೆದ ಸ್ಥಳ ಕೇವಲ 50 ಮೀ ದೂರದಲ್ಲಿದೆ.
ಜ್ಯುವೆಲ್ಲರ್ಸ್ ಅಂಗಡಿಯ ರೋಲಿಂಗ್ ಶಟರ್ ತೆಗೆದು ಒಳಗಿನ ಸ್ಲೈಡ್ ಗೇಟ್ ನ ಬೀಗ ಒಡೆದ ಕಳ್ಳರು ಒಳನುಗ್ಗಿ ಚಿನ್ನಾಭರಣ, ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಕಳ್ಳತನವಾದ ವಸ್ತುಗಳ ಒಟ್ಟು ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ. ಇಷ್ಟು ಹತ್ತಿರದಲ್ಲಿ ಎರಡೆರಡು ಪೊಲೀಸ್ ಠಾಣೆಗಳು ಇರುವಾಗಲೂ ಕಳ್ಳರು ನಿರಾತಂಕವಾಗಿ ಕಳ್ಳತನ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತಲ್ಲಣ ಉಂಟು ಮಾಡಿದೆ.
ರಿಪೇರಿಗೆ ಬಂದ ಚಿನ್ನ ಸಹಿತ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎನ್ನುವುದು ಸದ್ಯ ದೊರೆತಿರುವ ಪ್ರಾಥಮಿಕ ಮಾಹಿತಿ. ಕಳ್ಳತನ ನಡೆದಿರುವ ಜ್ಯುವೆಲರಿ ಶಾಪ್ ನ ಸಿ.ಸಿ ಟಿವಿ ನಿಷ್ಕ್ರಿಯವಾಗಿದ್ದೂ ಎದುರಿನ ಅಂಗಡಿಗಳ ಸಿ.ಸಿ ಟಿವಿಗಳನ್ನೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತಿದ್ದಾರೆ. ಸಿ.ಸಿ ಟಿವಿ ದೃಶ್ಯಾವಳಿ ದೊರೆತ ಬಳಿಕವಷ್ಟೇ ಕೃತ್ಯದ ಸಮಯ ತಿಳಿದು ಬರಲಿದೆ ಎನ್ನಲಾಗಿದೆ.