ಪುತ್ತೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ಮಹಿಳೆಯೊಬ್ಬರು ಚೂಡಿದಾರದ ಶಾಲನ್ನು ಕೊರಳಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರುನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ದರ್ಖಾಸು ನಿವಾಸಿ ಜಯರಾಮ ಗೌಡ ಎಂಬವರ ಪತ್ನಿ ದಿವ್ಯಾ (28ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಜಯರಾಮ ಗೌಡ ಹಾಗೂ ದಿವ್ಯಾರವರ ವಿವಾಹ 9 ವರ್ಷಗಳ ಹಿಂದೆ ನಡೆದಿತ್ತು ಎಂದು ತಿಳಿದು ಬಂದಿದೆ. ದಿವ್ಯಾ ಪುತ್ತೂರು ಅರುಣಾ ಚಿತ್ರಮಂದಿರ ಬಳಿಯ ಹೆಲ್ತ್ ಇನ್ಸೂರೆನ್ಸ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜಯರಾಮ ಗೌಡ ಅವರು ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ಬಜಾಜ್ ಶೋ ರೂಮ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆದಿತ್ಯವಾರ ರಜೆಯಿದ್ದ ಹಿನ್ನಲೆಯಲ್ಲಿ ಜಯರಾಮ ಗೌಡ ಮತ್ತು ಮಕ್ಕಳು ಬೆಳಂದೂರಿನಲ್ಲಿರುವ ತಂಗಿಯ ಮನೆಗೆ ಹೋಗಿದ್ದರು. ಮಧ್ಯಾಹ್ನ ಮನೆಗೆ ಹಿಂದಿರುಗುವಾಗ ಮನೆಯಲ್ಲಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ಮೃತರ ತಾಯಿ ಚಂದ್ರಾವತಿಯವರು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.