
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಬಳಸಿದ್ದ ‘ಕಾಕ್ರೋಚ್’ ಎಂಬ ಪದವನ್ನು ಆಧರಿಸಿ ರಚಿಸಲಾದ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನ ವಿಡಂಬನಾತ್ಮಕ ರಾಜಕೀಯ ಸಂಘಟನೆ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.ಈ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಕೆಲ ನಕಲಿ ವಕೀಲರು ಹಾಗೂ ನಕಲಿ ಪದವೀಧರರ ಚಟುವಟಿಕೆಗಳ ಕುರಿತು ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ನ್ಯಾಯಾಲಯದ ಕಲಾಪದ ವೇಳೆ ವ್ಯಕ್ತವಾದ ಅಭಿಪ್ರಾಯಗಳನ್ನು ವಾಣಿಜ್ಯಾತ್ಮಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲು ನ್ಯಾಯಾಲಯದ ಹೇಳಿಕೆಗಳನ್ನು ತುಣುಕುಗಳಾಗಿ ಕತ್ತರಿಸಿ ಮೀಮ್, ವ್ಯಂಗ್ಯ ವಿಡಿಯೊ ಹಾಗೂ ಪ್ರಚಾರ ಸಾಮಗ್ರಿಗಳ ರೂಪದಲ್ಲಿ ಹಂಚಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮೇ 15ರಂದು ನಡೆದಿದ್ದ ವಿಚಾರಣೆಯ ವೇಳೆ ನ್ಯಾಯಾಂಗ ಪ್ರಕ್ರಿಯೆಗಳ ದುರ್ಬಳಕೆ, ಹಿರಿಯ ವಕೀಲರ ಪದವಿ ಪ್ರದಾನ ಹಾಗೂ ಕಾನೂನು ವಲಯದಲ್ಲಿ ಕುಸಿಯುತ್ತಿರುವ ವೃತ್ತಿಪರ ಮಾನದಂಡಗಳ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರ ಬಳಿಕವೇ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನ ಸಂಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.ನ್ಯಾಯಾಲಯದ ಹೇಳಿಕೆಯನ್ನು ಅದರ ಮೂಲ ಸಾಂವಿಧಾನಿಕ ಹಾಗೂ ನ್ಯಾಯಾಂಗೀಯ ಸಂದರ್ಭದಿಂದ ಬೇರ್ಪಡಿಸಿ ವೈರಲ್ ವಿಷಯವನ್ನಾಗಿ ಪರಿವರ್ತಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಆದರೆ, ನ್ಯಾಯಾಂಗ ಟೀಕೆ, ಪ್ರಜಾಸತ್ತಾತ್ಮಕ ನಿನ್ನಮತ, ವ್ಯಂಗ್ಯ ಅಥವಾ ವಾಕ್ಸ್ವಾತಂತ್ರ್ಯದ ವಿರುದ್ಧ ಈ ಅರ್ಜಿ ಸಲ್ಲಿಸಲಾಗಿಲ್ಲ ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಲಾಗಿದೆ.ಬದಲಿಗೆ, ನ್ಯಾಯಾಲಯದ ಕಲಾಪಗಳ ಸಂಘಟಿತ ವಾಣಿಜ್ಯ ದುರ್ಬಳಕೆ, ಟ್ರೇಡ್ಮಾರ್ಕ್ ಮಾದರಿಯ ವಾಣಿಜೀಕರಣ ಹಾಗೂ ವೈರಲ್ ವಿಷಯಗಳ ನಗದೀಕರಣದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.








