

ಕನ್ಯಾನ, ಮೇ 21: ‘ಒಂದು ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಿಸುವುದು ಸುಲಭದ ಕೆಲಸವಲ್ಲ. ಇದು ಬಹುದೊಡ್ಡ ಸವಾಲು’ ಎಂದು ಕನ್ಯಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪದ್ಮನಾಭ ಅವರು ನುಡಿದರು. ಅವರು ಕನ್ಯಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನ ‘ಸಂಭ್ರಮ’ದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಶ್ರೀ ಅಬ್ದುಲ್ ರೆಹಮಾನ್ ಅವರು ‘ಈ ಕಾಲೇಜು ನಮ್ಮೂರಿನ ಹಿರಿಯರ ಕನಸು ಹಾಗೂ ಶ್ರಮದ ಫಲ. ಇದನ್ನು ಉಳಿಸುವುದು ನಮ್ಮ ಜವಾಬ್ದಾರಿ’ ಎಂದು ನುಡಿದರು.

ಕನ್ಯಾನ ಭಾರತೀ ಸೇವಾಶ್ರಮದ ಸಂಚಾಲಕರಾದ ಶ್ರೀ ಈಶ್ವರ ಭಟ್ ಅವರು ‘ಕನ್ಯಾನದಂತಹ ಗ್ರಾಮೀಣ ಪ್ರದೇಶದಲ್ಲಿ ಪದವಿ ಕಾಲೇಜು ನಿರ್ಮಿಸುವುದು ಸಲೀಸಿನ ಕಾರ್ಯವಾಗಿರಲಿಲ್ಲ.

ಊರಿನ ಉತ್ಸಾಹದಿಂದ, ಗಣ್ಯರ ಪ್ರೋತ್ಸಾಹದಿಂದ ತಲೆಯೆತ್ತಿದ ಈ ಕಾಲೇಜನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ನುಡಿದರು.ಪಂಚಾಯತ್ ಅಧ್ಯಕ್ಷರಾಗಿದ್ದ ರೇಖಾ, ಪಂಚಾಯತ್ ಕಾರ್ಯದರ್ಶಿ ರುಕ್ಮಯ ದಾಸ್, ಪಂಚಾಯತ್ ಸದಸ್ಯರಾಗಿದ್ದ ಅಬ್ದುಲ್ ಮಜೀದ್ ಅವರು ಶುಭ ಹಾರೈಸಿದರು.ವೇದಿಕೆಯಲ್ಲಿ ಮಲರಾಯ ದೈವಸ್ಥಾನದ ಕಾರ್ಯದರ್ಶಿ ಶ್ರೀ ಕೆ ಪಿ ಗಂಗಾಧರ್, ಸಿಡಿಸಿ ಸದಸ್ಯ ಶ್ರೀ ಬಿ ಕೆ ಇಬ್ರಾಹಿಂ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಚಟುವಟಿಕೆಯ ಭಾಗವಾಗಿ ನಡೆಸಿದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಉಪನ್ಯಾಸಕರಾದ ಶ್ರೀಮತಿ ಅಶ್ವಿನಿ ಬಿ, ಶ್ರೀಮತಿ ಜೊವಿಟಾ ಪ್ರಿಯಾ ಗೊನ್ಸ್ವಾಲಿಸ್, ಕುಮಾರಿ ನಿಕ್ಷಿತಾ ಬಿ, ಶ್ರೀ ಲೋಹಿತ್ ಕುಮಾರ್ ಬಹುಮಾನ ವಿಜೇತರ ಹೆಸರುಗಳನ್ನು ವಾಚಿಸಿದರು.

ಶ್ರೀ ಹೇಮಚಂದ್ರ ಹಾಗೂ ಶ್ರೀಮತಿ ಶಂಕರಿ ಬಿ ಸಹಕರಿಸಿದರು.ವಿದ್ಯಾರ್ಥಿನಿಯರಾದ ಕು. ಶರಣ್ಯ ಮತ್ತು ಬಳಗ ಪ್ರಾರ್ಥಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಚೈತ್ರಾ ಸ್ವಾಗತಿಸಿ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸವಿತಾ ವಂದಿಸಿದರು. ಕನ್ನಡ ಉಪನ್ಯಾಸಕಿ ಡಾ ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆತ್ತವರು, ವಿದ್ಯಾರ್ಥಿಗಳು, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.









