ರಾಮನಗರ: ಕನಕಪುರದ ಬಸವೇಶ್ವರ ನಗರದಲ್ಲಿ ಪತಿ ಕೋವಿಡ್ ನಿಂದ ಮೃತಪಟ್ಟಿದ್ದು, ಇದರಿಂದ ತೀವ್ರವಾಗಿ ನೊಂದ ಮೂರು ತಿಂಗಳ ಗರ್ಭಿಣಿ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕನಕಪುರ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಸಹಾಯಕರಾಗಿದ್ದ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮೈಸೂರು ಮೂಲದ ಉದ್ಯಮಿ ಸತೀಶ್ ಎಂಬವರನ್ನು ನಂದಿನಿ ಪ್ರೀತಿಸಿ ವಿವಾಹವಾಗಿದ್ದರು.
ಬಸವೇಶ್ವರ ನಗರದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಇವರು ಮೂರು ತಿಂಗಳ ಗರ್ಭಿಣಿಯಾಗಿದ್ದರು. ಕಳೆದ ವಾರ ಸತೀಶ್ ಅವರ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಇದರ ಬೆನ್ನಲ್ಲೇ ಸತೀಶ್ ಅವರಿಗೂ ಕೊರೊನಾ ಸೋಂಕು ಕಂಡು ಬಂದಿದೆ. ಕೊರೊನಾದಿಂದಾಗಿ ಮೂರು ದಿನಗಳ ಹಿಂದೆಯಷ್ಟೇ ಸತೀಶ್ ಮೃತಪಟ್ಟಿದ್ದಾರೆ.
ಪತಿಯ ಸಾವಿನಿಂದ ತೀವ್ರವಾಗಿ ನೊಂದ ನಂದಿನಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಅವರನ್ನು ತಂಗಿಯಂದಿರು ಬಸವೇಶ್ವರ ನಗರದ ಅವರ ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರು.
ನಿನ್ನೆ ಮಧ್ಯಾಹ್ನದ ವೇಳೆಗೆ ಅವರು ತಮ್ಮ ಕೋಣೆಗೆ ಹೋಗಿದ್ದಾರೆ. ಆದರೆ ಎಷ್ಟೇ ಸಮಯವಾದರೂ ಅವರು ರೂಮ್ ನಿಂದ ಹೊರಬಾರದಿದ್ದಾಗ ಅನುಮಾನಗೊಂಡು ರೂಮ್ ನೊಳಗೆ ನೋಡಿದಾಗಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.