ಕಾಸರಗೋಡು: ಕಾಸರಗೋಡಿನಿಂದ ವಿದೇಶಕ್ಕೆ ಹೋಗಿ ಅಲ್ಲಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಎಂಟು ಮಂದಿಯನ್ನು ಕೊಲ್ಲಿ ರಾಷ್ಟ್ರವಾದ ಯೆಮನ್ನಲ್ಲಿ ಪತ್ತೆ ಹಚ್ಚಲಾಗಿದೆ. ತೃಕ್ಕರಿಪುರ ಪರಿಸರದ ಒಂದೇ ಕುಟುಂಬದ ಆರು ಮಂದಿ ಇತ್ತೀಚೆಗೆ ತೃಕ್ಕರಿಪುರದಿಂದ ದುಬೈಗೆ ಹೋಗಿದ್ದರು.
ಅಲ್ಲಿಂದ ಅವರು ಕಳೆದ ಎರಡು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ನಡೆಸಿದ ಸಮಗ್ರ ತನಿಖೆಯಲ್ಲಿ ಈ ಎಂಟು ಮಂದಿಯನ್ನು ಯೆಮನ್ನಲ್ಲಿ ಪತ್ತೆಹಚ್ಚಲಾಗಿದೆ.
ಇದರ ನಿಗೂಢತೆಯನ್ನು ಬೇಧಿಸಲು ಕೇಂದ್ರ – ರಾಜ್ಯ ಹಾಗು ಗುಪ್ತಚರ ತನಿಖಾ ಇಂಟೆಲಿಜೆನ್ಸ್ ಬ್ಯೂರೋ(ಐಬಿ) ತಂಡಗಳು ತೃಕ್ಕರಿಪುರಕ್ಕೆ ತೆರಳಿ ಸಮಗ್ರ ತನಿಖೆ ಆರಂಭಿಸಿದೆ. ನಾಪತ್ತೆಯಾದವರ ಪೂರ್ಣ ಮಾಹಿತಿಗಳು, ಅವರ ಹಿನ್ನೆಲೆ, ಅವರು ವಿದೇಶಕ್ಕೆ ತೆರಳಲು ಹಾಗೂ ಅಲ್ಲಿಂದ ಯೆಮನ್ಗೆ ಹೋದ ಉದ್ದೇಶದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಮಹಿಳೆಯರೂ, ಮಕ್ಕಳು ಸಹಿತ ವರ್ಷಗಳ ಹಿಂದೆ ನಿಗೂಢ ರೀತಿಯಲ್ಲಿ 11 ಮಂದಿ ನಾಪತ್ತೆಯಾಗಿದ್ದರು. ಅವರು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐ.ಎಸ್) ನ ಸಿರಿಯಾ ಮತ್ತು ಅಫ್ಘಾನಿಸ್ಥಾನದಲ್ಲಿನ ಶಿಬಿರದಲ್ಲಿರುವ ಬಗ್ಗೆ ತಿಳಿದು ಬಂದಿತ್ತು