ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ತನಿಖೆ ಆರಂಭಿಸಿರುವ ಎಸ್ಐಟಿ (ವಿಶೇಷ ತನಿಖಾ ತಂಡ) ಮೊದಲ ಹಂತದಲ್ಲೇ ಐವರು ಪತ್ರಕರ್ತರನ್ನು ವಶಕ್ಕೆ ಪಡೆದಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ವೀಡಿಯೊ ನೀಡಿದ ತಂಡದಲ್ಲಿ ಓರ್ವ ಯುವತಿಯೂ ಇದ್ದು, ವಶಕ್ಕೆ ಪಡೆದವರು ಬೆಂಗಳೂರು, ರಾಮನಗರ, ವಿಜಯನಗರ ಮತ್ತು ಚಿಕ್ಕಮಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಸದ್ಯ ಎಸ್ಐಟಿ ಕಚೇರಿಯಲ್ಲಿ ಓರ್ವನಿಗೆ ಮಾತ್ರ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನುಳಿದ ನಾಲ್ವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ದಿನೇಶ್ ಕಲ್ಲಹಳ್ಳಿ ಮೊಬೈಲ್ ಸಂಪರ್ಕದ ಮಾಹಿತಿಯನ್ನೂ ಕೂಡ ಪೊಲೀಸರು ಸಂಗ್ರಹಿಸಿದ್ದರು.
ಎಸ್ಐಟಿ ವಶದಲ್ಲಿರುವ ಪತ್ರಕರ್ತರೆಲ್ಲ ಕನ್ನಡ ಸ್ಯಾಟಲೇಟ್ ಟಿವಿ ಚಾನಲ್ಗಳಲ್ಲಿ ಕೆಲಸ ಮಾಡುವ ವರದಿಗಾರರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರೆಲ್ಲರೂ ದಿನೇಶ್ ಕಲ್ಲಹಳ್ಳಿ ಜತೆ ಪ್ರಕರಣ ಹೊರ ಬರುವ 20 ದಿನಗಳ ಮುಂಚೆಯೇ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಸಾಮಾನ್ಯವಾಗಿ ಪತ್ರಕರ್ತರು ಸುದ್ದಿ ಮೂಲಕ್ಕಾಗಿ ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಸಾರ್ವಜನಿಕರ ಜತೆ ಸಂಪರ್ಕದಲ್ಲಿರುತ್ತಾರೆ. ವಶಕ್ಕೆ ಪಡೆದವರ ವಿಚಾರಣೆ ಬಳಿಕ ಸತ್ಯಾಸತ್ಯತೆ ಹೊರ ಬೀಳಲಿದೆ.