ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಬಾಂಬ್ ಇಡುವ ಪ್ಲ್ಯಾನ್ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್ ಮತೀನ್ ತಾಹಾನನ್ನು ರಾಷ್ಟ್ರೀಯ ತನಿಖಾ ದಳ ಕೋಲ್ಕತ್ತಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮಾಝ್ ಮುನೀರ್ನನ್ನು ಎನ್ಐಎ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಮುನೀರ್ ಬಳಿಯಿದ್ದ ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್ ಪರಿಶೀಲಿಸಿದಾಗ ಹಲವು ಕೋಡ್ ವರ್ಡ್ ಸಿಕ್ಕಿದ್ದವು. ಈ ಕೋಡ್ ವರ್ಡ್ ಡಿಕೋಡ್ ಮಾಡಿದಾಗ ಆರೋಪಿಗಳ ಮಾಹಿತಿ ಸಿಗತೊಡಗಿತು ಎಂದು ಎನ್ಐಎ ಮೂಲಗಳು ತಿಳಿಸಿವೆ.
ಮುಸಾವೀರ್ಗೆ ಬಾಂಬ್ ಮಾರ್ಗದರ್ಶನ ಕೊಟ್ಟಿದ್ದ ಮತೀನ್. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವನು. ಮತೀನ್, ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ. ಉಗ್ರ ಶಾರಿಕ್ಗೆ ಕುಕ್ಕರ್ ಕೊಟ್ಟು ಮಂಗಳೂರಿನಲ್ಲೂ ಸ್ಫೋಟ ಮಾಡಿಸಿದ್ದ. ಅದೇ ರೀತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡಲು ಮತೀನ್ ದೊಡ್ಡ ಪ್ಲಾನ್ ಮಾಡಿದ್ದ ಎನ್ನುವುದು ಎನ್ಐಎ ತನಿಖೆಯಿಂದ ಹೊರಬಿದ್ದಿದೆ.
ಮತೀನ್ ನೀಡಿದ ಸೂಚನೆಯಂತೆ ಕೆಫೆಯಲ್ಲಿ ಬಾಂಬ್ ಇಟ್ಟು ಪರಾರಿಯಾಗಿದ್ದ ಬಾಂಬರ್ ಮುಸಾವಿರ್, ಸೀದಾ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ. ಈತನಿಗಾಗಿ ಎನ್ಐಎ ಅಧಿಕಾರಿಗಳು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯದಲ್ಲಿ ಶೋಧ ನಡೆಸಿದರು. ಇಬ್ಬರು ಉಗ್ರರು ಪಶ್ಚಿಮ ಬಂಗಾಳದಲ್ಲಿದ್ದಾರೆಂಬ ಮಾಹಿತಿ ಸಿಕ್ಕಿದ ಕೂಡಲೇ ಅಲರ್ಟ್ ಆದ ಎನ್ಐಎ ಉಗ್ರರಾದ ಮುಸಾವಿರ್ ಹುಸೇನ್ ಹಾಗೂ ಮತೀನ್ ತಾಹನನ್ನ ಲಾಕ್ ಮಾಡಿದೆ.
ಇಬ್ಬರು ವಾಸವಿದ್ದ ಹೋಟೆಲ್ ಮೇಲೆ ಸ್ಥಳೀಯ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದು, ರಾತ್ರಿಯಿಡೀ ವಿಚಾರಣೆ ನಡೆಸಿ ನಿನ್ನೆ (ಏಪ್ರಿಲ್ 12) ಬೆಳಗ್ಗೆ 5 ಗಂಟೆಗೆ ಕಂಠಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಆದರೆ, ಆರೋಪಿಗಳ ಕಾರ್ಯಚರಣೆ ಬಗ್ಗೆ ಗೌಪ್ಯವಾಗಿ ಇಡಲಾಗಿತ್ತು. ಎನ್ಐಎ ಅಧಿಕಾರಿಗಳು ಮತ್ತು ಕಂಠಿ ಪೊಲೀಸರಿಗೆ ಮಾತ್ರ ಮಾಹಿತಿ ನೀಡಿತ್ತು. ನಸುಕಿನ ವೇಳೆ ಆರೋಪಿಗಳನ್ನು ಹಿಡಿದು ತಂದ ಬಳಿಕ ಎಲ್ಲರಿಗೂ ಗೊತ್ತಾಗಿದೆ. ಸದ್ಯ ಇಬ್ಬರು ಉಗ್ರರನ್ನ ಪರಗಣ ಜಿಲ್ಲೆಯ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಎನ್ಐಎ ವಿಶೇಷ ಕೋರ್ಟ್ ಇಬ್ಬರು ಉಗ್ರರನ್ನು ಮೂರು ದಿನ ಟ್ರಾನ್ಸಿಟ್ ಕಸ್ಟಡಿಗೆ ನೀಡಿದ್ದು, ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.
ಮುಸಾವಿರ್ ಮತ್ತು ಅಬ್ದುಲ್ ಮತೀನ್ನನ್ನು NIA ಅಧಿಕಾರಿಗಳು ಎಂಟು ವರ್ಷದಿಂದ ಹುಡುಕಾಟ ನಡೆಸುತ್ತಿದ್ದರು ಎನ್ನಲಾಗಿದೆ.. ಇಬ್ಬರ ಮೇಲೂ 10ರಿಂದ 15 ಕೇಸ್ಗಳಿದ್ದವು.. ಸದ್ಯ ರಾಮೇಶ್ವರಂ ಕೆಫೆ ಕೇಸ್ನಲ್ಲಿ ಇಬ್ಬರು ಲಾಕ್ ಆಗಿದ್ದು, NIA ತನಿಖೆ ನಡೆಸುತ್ತಿದ್ದು, ತನಿಖೆ ಬಳಿಕ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಉದ್ದೇಶ ಏನಾಗಿತ್ತು ಎನ್ನುವುದು ಬಯಲಾಗಬೇಕಿದೆ.