ಉತ್ತರ ಪ್ರದೇಶ: ಬಿಜೆಪಿ ಮುಖಂಡ ಗನ್ ತೋರಿಸಿ ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಪದವಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ವರ್ಷದ ಹಿಂದೆ ಅನೇಕ ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದಿದ್ದಾಳೆ ಸಂತ್ರಸ್ತೆ.
ಉತ್ತರ ಪ್ರದೇಶದ ಪ್ರಯಾಗರಾಜ್ ನಗರದ ಬಿಜೆಪಿ ಮುಖಂಡ ಡಾ.ಶ್ಯಾಮ್ ಪ್ರಕಾಶ್ ದ್ವಿವೇದಿ ಮತ್ತು ಗೆಳೆಯ ಡಾ.ಅನಿಲ್ ದ್ವಿವೇದಿ ನನ್ನ ಮೇಲೆ ಹಲವು ಗ್ಯಾಂಗ್ರೇಪ್ ಮಾಡಿದ್ದಾರೆ. ಪದೇ ಪದೇ ನನ್ನನ್ನು ಹೋಟೆಲ್ಗೆ ಬಲವಂತವಾಗಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ. ವಿಷಯ ಯಾರಿಗಾದರೂ ಹೇಳಿದರೆ ಕುಟುಂಬಸ್ಥರನ್ನು ಕೊಲೆ ಮಾಡಲಾಗುವುದು ಎಂದು ಜೀವ ಬೆದರಿಕೆ ಹಾಕಿದ್ದರು.
ಆದರೆ ಈ ಆರೋಪದ ವಿರುದ್ಧ ಕಿಡಿ ಕಾರಿರುವ ಶ್ಯಾಮ್ಪ್ರಕಾಶ್ ಅವರು, ಇವೆಲ್ಲಾ ಸುಳ್ಳು. ಈ ಭಾಗದಲ್ಲಿ ಮತಾಂತರ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ನಾನು ಕ್ರಮ ತೆಗೆದುಕೊಳ್ಳುತ್ತಿದ್ದೇನೆ. ಇದನ್ನು ಸಹಿಸದ ಕಾರಣ, ಈ ವಿದ್ಯಾರ್ಥಿನಿಯಿಂದ ಈ ರೀತಿ ಹೇಳಿಕೆ ನೀಡಿಸಿದ್ದಾರೆ ಎಂದಿದ್ದಾರೆ. ಇದು ರಾಜಕೀಯ ಒಳಸಂಚು ಎಂದಿದ್ದಾರೆ.
ವಿದ್ಯಾರ್ಥಿನಿ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿಲ್ಲ ಎನ್ನಲಾಗಿದೆ.
ಪ್ರತಾಪಗಢದಲ್ಲಿ ಜಮೀನು ಮಾರಾಟ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ನಂತರ ಪದೇ ಪದೇ ಹೋಟೆಲ್ಗೆ ಬಲವಂತವಾಗಿ ಕರೆದುಕೊಂಡು ಹೋಗಿ ಗನ್ ತೋರಿಸಿ ಅತ್ಯಾಚಾರ ಎಸಗುತ್ತಿದ್ದರು. ವಿಷಯ ಬಹಿರಂಗಪಡಿಸದಂತೆ ಬೆದರಿಕೆ ಹಾಕುತ್ತಿದ್ದರು. ಮನೆಯವರನ್ನು ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದರು ಎಂದಿದ್ದಾಳೆ ವಿದ್ಯಾರ್ಥಿನಿ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.