





‘ಈ ಸಲ ಕಪ್ ನಮ್ದೇ’ ಅಂದುಕೊಂಡು IPLನ ಈ ಸೀಸನ್ ಆರಂಭದಿಂದಲೇ ಭರವಸೆ ಮೂಡಿಸಿದ್ದ ಬೆಂಗಳೂರು ತಂಡವು ಕೊನೆಗೂ ಟ್ರೋಫಿ ಗೆದ್ದು ಕೋಟ್ಯಂತರ ಜನರ ನಿರೀಕ್ಷೆ, ನಂಬಿಕೆ ನಿಜವಾಗಿಸಿದೆ.
ಕೋಟ್ಯಂತರ ಅಭಿಮಾನಿಗಳ 17 ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಎತ್ತಿ ಹಿಡಿದು ಇತಿಹಾಸ ನಿರ್ಮಿಸಿದೆ. ಇಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ. ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಆರ್ಸಿಬಿ 6 ರನ್ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ತಂಡದ ಪರ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ಗಳ ಅಮೂಲ್ಯ ಕಾಣಿಕೆ ನೀಡಿದರು. ಕೆಳ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅವರ ಚಿನಕುರಳಿ ಆಟವು ತಂಡದ ಮೊತ್ತವನ್ನು 190ರ ಗಡಿ ದಾಟಿಸಲು ನೆರವಾಯಿತು.ಆದರೆ, ಪಂಜಾಬ್ ಕಿಂಗ್ಸ್ ಪರ ಮಾರಕ ದಾಳಿ ಸಂಘಟಿಸಿದ ಅರ್ಶದೀಪ್ ಸಿಂಗ್, ಕೊನೆಯ ಓವರ್ನಲ್ಲಿ ಕೇವಲ 3 ರನ್ ನೀಡಿ 3 ವಿಕೆಟ್ ಕಬಳಿಸಿ ಆರ್ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಈ ಹಿನ್ನಲೆ ಬೆಂಗಳೂರು, ಮಂಗಳೂರು ನಗರ ಸೇರಿ ಕರ್ನಾಟಕದೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಸಮಯ ಮಧ್ಯರಾತ್ರಿ 12ಗಂಟೆಯಾದರೂ ನಗರದ ರಸ್ತೆಗಳಲ್ಲಿ RCB ಅಭಿಮಾನಿಗಳ ಸಂಭ್ರಮಾಚರಣೆ, ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಮತ್ತೊಂದೆಡೆ, 18ವರ್ಷಗಳಿಂದ ಕಪ್ಗಾಗಿ ಕಾಯುತ್ತಿದ್ದವರಲ್ಲಿ ರೋಮಾಂಚನವುಂಟು ಮಾಡಿದೆ.