ವಿಠಲ ಎಜುಕೇಶನ್ ಸೊಸೈಟಿ (ರಿ) ವಿಟ್ಲ ಇದರ ಅಂಗಸಂಸ್ಥೆಗಳಾದ ವಿಠಲ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ರೋಟರಿ ಸಹಭಾಗಿತ್ವದಲ್ಲಿ ಸುವರ್ಣ ರಂಗ ಮಂದಿರದಲ್ಲಿ ಅದ್ದೂರಿಯಾಗಿ ಜರುಗಿತು.
ಸಭಾಧ್ಯಕ್ಷತೆಯನ್ನು ವಿಠ್ಠಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ವಹಿಸಿದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಅವರು ಕಾರ್ಯಕ್ರಮದ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಧನಂಜಯ ಮಾತನಾಡಿ ದೇಶ ಸೇವೆಯ ಸಾರ್ಥಕತೆಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಸೇನಾ ನಿವೃತ್ತಿ ಹೊಂದಿದ ಸೇನಾನಿಗಳಾದ ಅಶೋಕ್ ಮಾಡತ್ತಾರು, ಸುಬೇದಾರ್ ಮೇಜರ್ ಬಾಲಕೃಷ್ಣ ರೈ, ಭಾಸ್ಕರ ಗೌಡ, ಸತೀಶ್ ಸುವರ್ಣ ಪಿ, ಎನ್ ಕೆ. ಪ್ರವೀಣ ಇವರನ್ನು ಸಂಸ್ಥೆ ಮತ್ತು ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಉಚಿತ ಶಿಕ್ಷಣಕ್ಕಾಗಿ ರೂಪಾಯಿ 5 ಲಕ್ಷವನ್ನು ಶೇಷಗಿರಿ ಕಾಮತ್ ದಂಪತಿ ದೇಣಿಗೆಯಾಗಿ ನೀಡಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ. ಶ್ರೀಪತಿರಾವ್ ಹತ್ತು ಸಾವಿರ ರೂಪಾಯಿಯ ಚೆಕ್ಕನ್ನು ಕುಮಾರಿ ಜೀವಿತಾಳಿಗೆ ಹಸ್ತಾಂತರಿಸಿದರು.
ವಿದ್ಯಾರ್ಥಿಗಳಿಗೆ, ಕಲಿಕಾ ಸಾಧಕರಿಗೆ ಹಾಗೂ ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು, ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಇವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.