ಮೈಸೂರು: ರೌಡಿಶೀಟರ್ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐದು ಜನರನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ. 11ಜನರು ಈ ಕೃತ್ಯ ಎಸಗಿದ್ದು, ಅದರಲ್ಲಿ 7ಜನರನ್ನು ಪೊಲೀಸರು ಬಂಧಿಸಿದ್ದರು.
ವರುಣ್, ದರ್ಶನ್, ಅನಿಲ್, ಸಚಿನ್, ವೆಂಕಟೇಶ್ ಬಂಧಿತ ಆರೋಪಿಗಳು.
ಡಬಲ್ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದ ರೌಡಿಶೀಟರ್ ಚಂದ್ರು ಆರೋಪ ಸಾಬೀತಾಗದ ಕಾರಣ ಕೆಲ ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ. ಯಾವುದೇ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗದೇ ತಾನಾಯ್ತು ತನ್ನ ಕುಟುಂಬವಾಯ್ತು ಅಂತಾ ಜೀವನ ಸಾಗಿಸುತ್ತಿದ್ದ. ಆದರೆ ವಿರೋಧಿಗಳು ಕೊಲೆ ಸೇಡಿಗಾಗಿ ಕಾದು ಕುಳಿತಿದ್ದರು. 2008 ರ ಮೇ 15 ರಂದು ಹುಣಸೂರಿನ ಎಪಿಎಂಸಿ ಬಳಿಯ ತೋಟದ ಮನೆಯಲ್ಲಿ ಇಬ್ಬರ ಹತ್ಯೆಯಾಗಿತ್ತು. ಹಾಗೆಯೇ 2016 ರಲ್ಲಿ ಮೇ 5 ರಂದು ಪಡುವಾರಹಳ್ಳಿ ದೇವು ಹತ್ಯೆಯಾಗಿತ್ತು. ಈ ಎರಡೂ ಪ್ರಕರಣದ ಆರೋಪಿಯಾಗಿದ್ದ ಚಂದ್ರು ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ಜೊತೆಗೆ ಜೈಲು ಸೇರಿ ಇತ್ತೀಚೆಗೆ ದೋಷಮುಕ್ತನಾಗಿ ಹೊರಬಂದಿದ್ದ.
ಜೈಲಿನಿಂದ ಬಂದವನು ಯಾವುದಕ್ಕೂ ತಲೆಹಾಕದೆ ತಾನಾಯ್ತು ತನ್ನ ಮನೆಯಾಯ್ತು ಅಂತಾ ಅರಾಮಾಗಿದ್ದ. ಚಂದ್ರು ಒಂಟಿಕೊಪ್ಪಲಿನ ತನ್ನ ಮನೆ ಬಳಿ ಟೈಲರ್ ಅಂಗಡಿ ಮುಂಭಾಗ ಸಂಜೆ 5 ಗಂಟೆ ವೇಳೆಗೆ ಮಾತನಾಡುತ್ತ ಕುಳಿತಿದ್ದ. ಈ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದ ಹಂತಕರ ತಂಡ ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿತ್ತು. ಕೂಡಲೇ ಸಂಬಂಧಿಕರು ಹಲ್ಲೆಗೊಳಗಾದ ಚಂದ್ರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಚಂದ್ರು ಸಾವನ್ನಪ್ಪಿದ್ದ. ಇನ್ನೂ ವಿಚಾರ ತಿಳಿದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದರು.
ಹುಣಸೂರು ಡಬ್ಬಲ್ ಮರ್ಡರ್, ಪಡುವಾರಹಳ್ಳಿ ದೇವು ಹತ್ಯೆ ಮೇ ತಿಂಗಳಲ್ಲೇ ಆಗಿತ್ತು. ಇದೀಗ ಚಂದ್ರು ಮರ್ಡರ್ ಸಹ ಮೇ ತಿಂಗಳಿನಲ್ಲಿಯೇ ನಡೆದಿದೆ. ಇದೆಲ್ಲವನ್ನೂ ಗಮನಿಸಿದರೆ ಪಡುವಾರಹಳ್ಳಿ ದೇವು ಮರ್ಡರ್ ಗೆ ಪ್ರತಿಕಾರವಾಗಿ ಚಂದ್ರು ಹತ್ಯೆ ನಡೆದಿತ್ತಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದೀಗ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾತಕಿಗಳನ್ನ ಪತ್ತೆ ಹಚ್ಚಿದ್ದಾರೆ.