


ಮಂಗಳೂರು: ಮುಂಬಯಿಯ ಉದ್ಯಮಿ ಹಾಗೂ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮನನೊಂದಿದ್ದು, ತಮ್ಮ ಸಮಾಜ ಸೇವಾ ಚಟುವಟಿಕೆಗಳಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಜಾಗತಿಕ ಬಂಟರ ಸಂಘದ ಲೆಕ್ಕಪತ್ರಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕಾಗಿ ತಮ್ಮ ವಿರುದ್ಧ ತೇಜೋವಧೆ ಹಾಗೂ ಮಾನಸಿಕ ಒತ್ತಡ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

“ಸಮಾಜ ಸೇವೆ ನನ್ನ ಜೀವನಕ್ಕೆ ಆತ್ಮತೃಪ್ತಿ ನೀಡುತ್ತಿದ್ದ ಕಾರ್ಯ. ಆದರೆ ಈಗ ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ನೋವು ವ್ಯಕ್ತಪಡಿಸಿದರು. “ದಾನಿಗಳಿಗೆ ಲೆಕ್ಕ ಕೇಳುವ ಹಕ್ಕಿಲ್ಲವೇ?” ಎಂದು ಪ್ರಶ್ನಿಸಿದ ಶೆಟ್ಟಿ, ಫೆಬ್ರವರಿ 16ರಂದು ಮುಂಬಯಿಯಲ್ಲಿ ನಡೆದ ಸಭೆ ಎಲ್ಲಾ ದಾನಿಗಳ ಒಪ್ಪಿಗೆಯೊಂದಿಗೆ ನಡೆದದ್ದು, ಆ ಸಭೆಗೆ ಸಂಬಂಧಿಸಿ ಜಾಹೀರಾತು ನೀಡುವುದು ಹಾಗೂ ಲಾಯರ್ ನೋಟಿಸ್ ಕಳುಹಿಸುವುದು ಅಸಮಂಜಸ ಕ್ರಮ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಹೇಳಿಕೆಗಳು ಹರಡುತ್ತಿರುವುದರಿಂದ, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು, ಈ ಸಂಬಂಧ ಈಗಾಗಲೇ ಕೇರಳದಲ್ಲಿ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದರು.
ಫೆಬ್ರವರಿ 14ರಿಂದ ಸಂಘ–ಸಂಸ್ಥೆಗಳಿಗೆ ನೀಡುತ್ತಿದ್ದ ಎಲ್ಲಾ ದೇಣಿಗೆ ಹಾಗೂ ಆರ್ಥಿಕ ಸಹಾಯವನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದ ಶೆಟ್ಟಿ, ಆದರೆ ವೈಯಕ್ತಿಕವಾಗಿ ಬಡವರ ಆರೋಗ್ಯ, ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ನೆರವಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಸಹಾಯ ಮುಂದುವರಿಸುವುದಾಗಿ ಭರವಸೆ ನೀಡಿದರು.
“ಸಮಾಜ ಸೇವೆಯಿಂದ ಹಿಂದೆ ಸರಿದರೂ ಮಾನವೀಯ ಸೇವೆ ನನ್ನ ಜೀವನದ ಭಾಗವಾಗಿಯೇ ಮುಂದುವರಿಯಲಿದೆ” ಎಂದು ಅವರು ಸ್ಪಷ್ಟಪಡಿಸಿದರು.








