ಸಾಗರ: ನಗರದ ಲಾಡ್ಜ್ವೊಂದರಲ್ಲಿ ಯುವಕರಿಬ್ಬರು ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಸಂತೋಷ ಅಡವಿನ್ನವರ(23) ಮತ್ತು ಹನುಮಂತ ಆಲಗೂರ(28) ಎನ್ನಲಾಗಿದೆ.
ಅವರಿಬ್ಬರು ಸೆ.24ರ ತಡರಾತ್ರಿ ಲಾಡ್ಜ್ಗೆ ಬಂದು ರೂಂ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಮ್ ಸೇರಿಕೊಂಡಿದ್ದರು. ಶನಿವಾರ ರಾತ್ರಿ 8.30ಕ್ಕೆ ರೂಮ್ ಬಾಯ್ ಊಟಕ್ಕೆಂದು ಕೇಳಲು ಬಾಗಿಲು ಬಡಿದಾಗ ಇಬ್ಬರೂ ಹೊರಗೆ ಬಂದಿರಲಿಲ್ಲ.
ಇಬ್ಬರೂ ಮಲಗಿರಬೇಕೆಂದು ರೂಮ್ ಬಾಯ್ ವಾಪಸ್ ಹೋಗಿದ್ದ. ಭಾನುವಾರ ಬೆಳಗ್ಗೆ ರೂಮಿನ ಬಾಗಿಲು ಬಡಿದಾಗಲೂ ತೆರೆಯಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ರೂಮಿನ ಬಾಗಿಲು ಒಡೆದು ನೋಡಿದಾಗ ಇಬ್ಬರ ಶವಗಳು ಸೀಲಿಂಗ್ಗೆ ಅಳವಡಿಸಿದ್ದ ಎರಡು ಫ್ಯಾನಿನಲ್ಲಿ ನೇತಾಡುತ್ತಿದ್ದವು.
ಸಾವಿಗೂ ಮುನ್ನ ಮದ್ಯಪಾನ ಮಾಡಿ ಊಟ ಮಾಡಿದ್ದ ಯುವಕರು, ವ್ಯಕ್ತಿಯೊಬ್ಬರ ಫೋಟೋಗೆ ಪೂಜೆ ಮಾಡಿ ಫೋಟೋ ಎದುರೇ ಮದ್ಯ ಇಟ್ಟಿದ್ದಾರೆ. ಊರಿನಲ್ಲಿ ಜಾತ್ರೆ ಇರುವ ಹಿನ್ನೆಲೆ ಬನಹಟ್ಟಿಗೆ ಬರುವುದಾಗಿ ಕುಟುಂಬಸ್ಥರಿಗೆ ಕರೆ ಮಾಡಿದ್ದರು. ಊರಿಗೆ ಹೋಗದೆ ಸಾಗರಕ್ಕೆ ಏಕೆ ಬಂದಿದ್ದರು ಎಂಬುದು ತನಿಖೆ ಬಳಿಕವಷ್ಟೇ ತಿಳಿದುಬರಬೇಕಿದೆ. ಈ ಘಟನೆ ಬಗ್ಗೆ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.