ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲಿನಲ್ಲಿ ಇಂದು(ಅ.24) ಮತ್ತೊಂದು ಆನೆ ಸಾವಿಗೀಡಾಗಿದೆ. ಕಳೆದ ವಾರವಷ್ಟೇ ಇದೇ ಶಿಬಿರದ ಏಕದಂತ ಆನೆ ಸಾವನ್ನಪ್ಪಿದ್ದು, ಐದು ದಿನಗಳ ಅಂತರದಲ್ಲಿ ಇದೀಗ ಮತ್ತೊಂದು ಆನೆ ‘ರಂಗ’ ಸಾವನ್ನಪ್ಪಿದ್ದು, ಒಂದೇ ವಾರದಲ್ಲಿ ಮರಿಯಾನೆ ಸೇರಿ ಮೂರು ಆನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಇದರಿಂದಾಗಿ ಆನೆ ಬಿಡಾರದಲ್ಲಿ ಸೂತಕದ ಛಾಯೆ ಆವರಿಸಿದೆ.
ಕಳೆದ ರಾತ್ರಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಬಲಿಯಾಗಿದ್ದಾನೆ. ಸಕ್ರೆಬೈಲು ಬಿಡಾರದಲ್ಲಿ ಹುಟ್ಟಿದ ರಂಗ ಗೀತಾ ಎಂಬ ಆನೆ ಮರಿ ಇದಾಗಿದ್ದು, ಆನೆಗೆ 35 ವರ್ಷವಾಗಿದೆ. ಈ ರಂಗ ಇಡೀ ಬಿಡಾರದಲ್ಲೇ ಮೈಮಾಟದಿಂದ ಅತ್ಯಂತ ಆಕರ್ಷಕ ಆನೆ ಎಂಬ ಖ್ಯಾತಿ ಪಡೆದಿದ್ದ. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಕಲೇಶಪುರ ತಾಲೂಕಿನ ಮಳಲಿ ಕಾಫಿತೋಟದಿಂದ ಬಂದಿದ್ದ ಮರಿಯಾನೆ ಅ.17ರಂದು ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟರೆ, ಅ.20ರಂದು ಏಕದಂತ ಆನೆ ಹೃದಯಾಘಾತ ಮತ್ತು ಲಿವರ್ ಸಮಸ್ಯೆಯಿಂದ ಕಾಡಿನಲ್ಲೇ ಮೃತಪಟ್ಟಿತ್ತು.