✍? – ಸಲೀಂ ಮಾಣಿ
ಗ್ಯಾಸ್ ಟ್ಯಾಂಕರ್ ಪಲ್ಟಿ ಆಗಿದೆ ಎಂಬ ಸುದ್ದಿ ಸಿಕ್ಕಿದರೆ ಕೂಡಲೇ ನೆನಪಾಗುವುದು ಪೆರ್ನೆ ಗ್ಯಾಸ್ ದುರಂತ ಹಲವಾರು ಪ್ರಾಣಗಳನ್ನು ಬಲಿ ತೆಗೆದುಕೊಂಡ ಆ ಭೀಕರ ದುರಂತವನ್ನು ನೆನಪಿಸಿಕೊಂಡಾಗಲೆಲ್ಲಾ ಕಣ್ಣೀರು ಬಾರದೆ ಇರದು ಸೂರಿಕುಮೇರು ಮಸೀದಿ ಬಳಿ ನಾಲ್ಕು ವರ್ಷಗಳ ಹಿಂದೆ ಅದೇ ಸ್ಥಳದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದು ಸೋರಿಕೆ ಉಂಟಾದಾಗ ಸುತ್ತಮುತ್ತಲಿನ ಜನರನ್ನು ಬೇರೆಕಡೆ ಸ್ಥಳಾಂತರಿಸಿ ಸಂಭಾವ್ಯ ಅನಾಹುತದ ಎಚ್ಚರಿಕೆಯಿಂದ ಮುಂಜಾಗ್ರತೆ ವಹಿಸಲಾಗಿತ್ತು.
ಈ ಬಾರಿಯೂ ಅದೇ ಸ್ಥಳದಲ್ಲಿ ಮತ್ತೆ ಉರುಳಿ ಬಿದ್ದಿದ್ದು ಸೋರಿಕೆ ಉಂಟಾಗದಿದ್ದರೂ ಸ್ಥಳೀಯರಲ್ಲಿ ಉಂಟಾದ ಆತಂಕ ಮತ್ತು ಪ್ರಯಾಣಿಕರು ವಾಹನ ಚಾಲಕರು ತಲುಪಬೇಕಾದ ಸ್ಥಳಕ್ಕೆ ತಲುಪಲು ಸುತ್ತು ಬಳಸಿ ಹೋಗಲು ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ,ಸಂಜೆ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಗ್ಯಾಸ್ ಟ್ಯಾಂಕರ್ಗಳ ಸಂಚಾರಕ್ಕೆ ನಿರ್ಬಂಧ ಇದ್ದರೂ ಕಡಿವಾಣ ಅಂತೂ ಉಂಟಾಗಿಲ್ಲ,ಮಧ್ಯರಾತ್ರಿ ಪುಟಾಣಿ ಮಕ್ಕಳೊಂದಿಗೆ ಗಾಢ ನಿದ್ರೆಯಲ್ಲಿರುವ ಮನೆಯವರು ಪಲ್ಟಿ ಹೊಡೆದ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ ಉಂಟಾದರೆ ತಕ್ಷಣಕ್ಕೆ ಏನು ತಾನೇ ಮಾಡಿಯಾರು? ಊಹಿಸಲೂ ಅಸಾಧ್ಯ ,ಕ್ಷಣದಲ್ಲೇ ಹಲವು ಕಿಲೋಮೀಟರ್ ನಷ್ಟು ಬೆಂಕಿ ಹರಡಬಲ್ಲ ಸಾಮರ್ಥ್ಯ ಹೊಂದಿರುವಷ್ಟು ಗ್ಯಾಸ್ ತುಂಬಿರುವ ಆ ಟ್ಯಾಂಕರ್ ಗಳು ಅನಾಹುತದ ಭಯವಿಲ್ಲದೆ ಅತೀ ವೇಗವಾಗಿ ಚಲಾಯಿಸುವುದರಿಂದಲೂ ಒಮ್ಮೆಲೇ ಬ್ರೇಕ್ ಹಾಕುವುದರಿಂದಲೂ ರಸ್ತೆ ಮತ್ತು ಫುಟ್ಪಾತ್ ಮಧ್ಯೆ ಇರುವ ಉಬ್ಬು ತಗ್ಗುವಿನ ಮೇಲೆ ಟಯರ್ ಸಿಲುಕಿದಾಗ ಹೀಗೆ ಅಪಘಾತಕ್ಕೆ ಹಲವಾರು ಕಾರಣಗಳನ್ನು ಹೇಳಬಹುದಾದರೂ ಯಾವುದೇ ರೀತಿಯ ಮುನ್ನೆಚ್ಚರಿಕೆ ಇಲ್ಲದೆ ಬೇಜವಾಬ್ದಾರಿ ತನದಿಂದ ಚಲಾಯಿಸುವುದು ಕೂಡಾ ಚಾಲಕರ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿವೆ, ಒಮ್ಮೆಲೆ ಸಿಗುವ ತಿರುವುಗಳು ಘನವಾಹನಗಳ ಪಾಲಿಗೆ ಅಪಾಯಕಾರಿಯಾಗಿರುವುದಂತೂ ಸತ್ಯ ಆದರೆ ಡಾಮರೀಕರಣಗೊಂಡ ರಸ್ತೆಯ ಎರಡೂ ಬದಿಗಳಿಗೆ ಕೂಡಲೇ ಮಣ್ಣು ಹಾಕುವ ವ್ಯವಸ್ಥೆ ಮಾಡದ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯತನವೂ ಅವಘಡಗಳಿಗೆ ಕಾರಣವಲ್ಲವೇ ?ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಾತ್ರಿ ವೇಳೆ ಗ್ಯಾಸ್ ಸಾಗಾಟದ ಟ್ಯಾಂಕರ್ ಗಳಿಗೆ ನಿರ್ಬಂಧ ವಿಧಿಸುವರೇ ಕಾದು ನೋಡಬೇಕಾಗಿದೆ.