ತಿರುವನಂತಪುರ: ನವೆಂಬರ್ ತಿಂಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಪೂಜೆಗಳು ನಡೆಯಲಿದ್ದು, ಕೋವಿಡ್ ನಡುವೆಯೂ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅನುಮತಿ ನೀಡಲಾಗಿದೆ. ಈ ಬಾರಿ ಭಕ್ತರು ಪಂಬ ನದಿಯಲ್ಲಿ ಸ್ನಾನ ಮಾಡುವಂತಿಲ್ಲ. ಅದರ ಬದಲಾಗಿ ಪಂಬ ಮತ್ತು ಏರುಮಲೈನಲ್ಲಿ ಶವರ್ ಏರ್ಪಾಡು ಮಾಡಲಾಗುತ್ತದೆ. ಅದರ ಕೆಳಗೆ ನಿಂತು ಸ್ನಾನ ಮಾಡಿದ ಬಳಿಕ ಭಕ್ತರು ಬೆಟ್ಟ ಹತ್ತಬಹುದು. ಅಭಿಷೇಕದಿಂದ ಅನ್ನದಾನದವರೆಗೆ ಈ ಬಾರಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನವೆಂಬರ್ 16ರಿಂದ ಶಬರಿಮಲೆಯ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ಈ ವೇಳೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕಳೆದ ವರ್ಷಗಳಿಗಿಂತ ಈ ವರ್ಷ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕೊರೋನಾ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ನಿನ್ನೆ ಕೇರಳ ಸರ್ಕಾರ ತಿಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ 10 ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟವರಿಗೆ ದೇಗುಲದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ.
ನಾನಾ ರಾಜ್ಯಗಳಿಂದ ಬರುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಕೊರೋನಾ ಟೆಸ್ಟ್ ಕಡ್ಡಾಯವಾಗಿದೆ. ಹಾಗೇ, ಬೇರೆ ರಾಜ್ಯದ ಭಕ್ತರು ಶಬರಿಮಲೆಯಲ್ಲಿ ಉಳಿಯುವಂತಿಲ್ಲ. ಅವರಿಗೆ ವಸತಿ ವ್ಯವಸ್ಥೆಗೆ ಅವಕಾಶ ನೀಡುವುದಿಲ್ಲ. ಹಾಗೇ, ನಿಲಕ್ಕಲ್ ಮತ್ತು ಪಂಬದಲ್ಲಿ ಭಕ್ತಾದಿಗಳಿಗೆ ಆಂಟಿಜೆನ್ ಪರೀಕ್ಷೆ ನಡೆಸಿ, ಒಳಗೆ ಬಿಡಲಾಗುತ್ತದೆ. ಅಯ್ಯಪ್ಪಸ್ವಾಮಿ ಬೆಟ್ಟವನ್ನು ಹ್ತತಿ ಬರಬೇಕಾದ್ದರಿಂದ ಮಾಸ್ಕ್ ಧರಿಸಿದರೆ ಉಸಿರಾಟದ ತೊಂದರೆಯಾಗುತ್ತದೆಯೇ? ಎಂಬ ಬಗ್ಗೆ ಆರೋಗ್ಯಾಧಿಕಾರಿಗಳು ಅಧ್ಯಯನ ನಡೆಸಿ, ತಿಳಿಸಲಿದ್ದಾರೆ. ಈ ಬಾರಿ ಭಕ್ತರು ಸಾಲುಗಟ್ಟಿ ನಿಲ್ಲುವ ಬದಲು ವರ್ಚುವಲ್ ಸಾಲನ್ನು ಅನುಸರಿಸಲು ನಿರ್ಧರಿಸಲಾಗಿದೆ.