ಯುಪಿಐ ಕ್ಯೂ ಆರ್ ಕೋಡ್ ಸ್ಕ್ಯಾನರ್ ಮುಖಾಂತರ ಹಣ ಪಡೆಯುವ ಅಂಗಡಿ ಮಾಲೀಕರೇ ಹುಷಾರಾಗಿರಿ. ಅಂಗಡಿ ಮಾಲೀಕರೊಬ್ಬರು ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನರ್ ಮುಖಾಂತರ 48 ಸಾವಿರ ರೂ. ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಲ್ಯಾಣ ನಗರದ ಮಂಜುನಾಥ ಟಿಫನ್ ಸೆಂಟರ್ ಮಾಲೀಕ ಭಾಸ್ಕರ್ ವಂಚನೆಗೆ ಒಳಗಾದ ವ್ಯಕ್ತಿ.
ಏ. 4ರ ಮಧ್ಯಾಹ್ನ 12 ಗಂಟೆಗೆ ಭಾಸ್ಕರ್ ಅವರ ಅಂಗಡಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಿಮ್ಮ ಪೇಟಿಎಂ ಸ್ಕ್ಯಾನರ್ ಅಪ್ಡೇಟ್ ಆಗಿಲ್ಲ ಎಂದು ಹೇಳಿದ್ದಾನೆ. ನಂತರ ಆತ ನಾನು ಅಪ್ಡೇಟ್ ಮಾಡಿಕೊಡುತ್ತೇನೆ ಎಂದು ಹೇಳಿ ಮೊಬೈಲ್ ತೆಗೆದುಕೊಂಡಿದ್ದು,ಮೊಬೈಲ್ ತೆಗೆದುಕೊಂಡ ಬಳಿಕ ಒಂದು ರೂ. ಕಳುಹಿಸಿ ಮಧ್ಯಾಹ್ನ ಸ್ಕ್ಯಾನರ್ ಅಪ್ಡೇಟ್ ಆಗಿದೆ ಎಂದು ಹೇಳಿ ತೆರಳಿದ್ದಾನೆ. ಆತ ಹೋದ ನಂತರ 18,000 ರೂ. 30,000 ರೂ. ಕಡಿತಗೊಂಡ ಮೆಸೇಜ್ ಇವರ ಮೊಬೈಲ್ ಬಂದಾಗ ತಾನು ಮೋಸ ಹೋದ ವಿಚಾರ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮುಷರಫ್ ಖಾನ್, ಮೊಹಮ್ಮದ್ ಸಿರಾಜ್ ಹೆಸರಿನ ಖಾತೆಯಿಂದ ವಂಚನೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುಪಿಐ ಬಗ್ಗೆ ಗೊತ್ತಿಲ್ಲದವರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದಾರೆ. ಯಾವ ಅಂಗಡಿಯಲ್ಲಿ ಯುಪಿಐ ಇರುತ್ತೋ ನಾವು ಅದರ ಏಜೆಂಟ್ಗಳು ಎಂದು ಆರಂಭದಲ್ಲಿ ಹೇಳಿ ನಿಮ್ಮ ಯುಪಿಐ ಸ್ಕ್ಯಾನರ್ ಅಪ್ಡೇಟ್ ಆಗಿಲ್ಲ ಎಂದು ನಂಬಿಸುತ್ತಾರೆ. ನೀವು ಈಗಲೇ ಅಪ್ಡೇಟ್ ಮಾಡದೇ ಇದ್ದರೆ ಹಣ ಸೆಂಡ್ ಆಗುವುದಿಲ್ಲ ಎಂದು ನಂಬಿಸುತ್ತಾರೆ. ಈ ವಿಚಾರ ತಿಳಿಯದ ವ್ಯಾಪಾರಿಗಳು ಮೊಬೈಲನ್ನು ಅವರ ಕೈಗೆ ಕೊಡುತ್ತಾರೆ. ಈ ಮೂಲಕ ವಂಚಕರು ಹಣವನ್ನು ಎಗರಿಸುತ್ತಾರೆ.