ವಿಟ್ಲ: ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರಿನಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ ಶ್ರೀ ಚಂಡಿಕಾ ಯಾಗವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.19ರಂದು ನಡೆಯಲಿದೆ.
ಬೆಳಿಗ್ಗೆ 9.00ರಿಂದ ಶ್ರೀ ಗುರುದೇವಾನುಗ್ರಹ ಪುರಸ್ಸರ “ಶ್ರೀ ಒಡಿಯೂರು ಕಲಾಸಿರಿ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಾದ್ವಿ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತರಿರುವರು.
ಯಕ್ಷಗಾನ ನಾಟ್ಯಾಚಾರ್ಯ ರಾಮ ಭಟ್ ಸಬ್ಬಣಕೋಡಿ, ರಂಗನಟ, ಅಣ್ಣ ದೈವಪಾತ್ರಿ ಪುರುಷೋತ್ತಮ ಯಾನೆ ರಾಜ ಬೆಳ್ಚಪ್ಪಾಡ, ತಬಲಾ ಮತ್ತು ಮೃದಲಾ ವಾದಕಿ ಅನಿತಾ ಪ್ರಭು ಬಿ.ಸಿ.ರೋಡ್, ತುಳು ರಂಗಭೂಮಿ ಕಲಾವಿದ ರಮೇಶ್ ಮಾಸ್ತರ್ ಬಿ.ಸಿ.ರೋಡ್,ವೈಶಾಲಿ ಸ್ಟುಡಿಯೋ ಬಂಟ್ವಾಳದ ಛಾಯಾಗ್ರಾಹಕ ಟಿ. ಹರೀಶ್ ರಾವ್ ಇವರುಗಳಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಧ್ಯಾಹ್ನ 12.30ರಿಂದ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ , ಶ್ರೀ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ ನಡೆಯಲಿದೆ. ಬಳಿಕ 2.30ರಿಂದ ಸರಯೂ ಬಾಲ ಯಕ್ಷವೃಂದ(ರಿ), ಕೋಡಿಕಲ್ ಇವರಿಂದ ವರ್ಕಾಡಿ ಶ್ರೀ ರವಿ ಅಲೆವೂರಯ ವಿರಚಿತ “ಶ್ರೀ ಮಾತೆ ಭದ್ರಾಕಾಳಿ” ಯಕ್ಷಗಾನ ಬಯಲಾಟ ನಡೆಯಲಿದೆ.
ಸಂಜೆ 6.00ರಿಂದ ಸಾಮೂಹಿಕ ಸ್ವಯಂವರ ಪಾರ್ವತಿ ಪೂಜೆ, ಅಷ್ಟಾವಧಾನ ಸೇವೆ, ಭದ್ರಕಾಳಿಗೆ ವಿಶೇಷಪೂಜೆ ನಡೆಯಲಿದೆ. ಅ.23ರಂದು ಶ್ರೀ ಶಾರದಾ ಮಹೋತ್ಸವ-ಸಾಮೂಹಿಕ ವಿದ್ಯಾರಂಭ ಬಳಿಕ ಅಪರಾಹ್ನ 3.00ರಿಂದ ಸಾಮೂಹಿಕ ವಾಹನ ಪೂಜೆ ನಡೆಯಲಿದೆ.