ಪುತ್ತೂರು: ಇದೇ ಮೊದಲ ಬಾರಿಗೆ ನ.25-26 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಯಶಸ್ಸಿಗಾಗಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತೂರು ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ ಸಂಚಾಲಕ ಅಶೋಕ್ ಕುಮಾರ್ ರೈ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ಬೆಂಗಳೂರಿನಲ್ಲಿ ನಮ್ಮ ಕಂಬಳ ಬಹಳ ವಿಜೃಂಭಣೆಯಿಂದ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದೆ. ಇದರ ಎಲ್ಲಾ ಪೂರ್ವಭಾವಿ ಕಾರ್ಯಗಳು ನಡೆಯುತ್ತಿದೆ. ಅ.11ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಬೆಂಗಳೂರಿನಲ್ಲಿ ಕರೆ ಮುಹೂರ್ತ ನಡೆಯಲಿದೆ.
ತುಳುನಾಡ ಕ್ರೀಡೆ ಕಂಬಳ ಒಳ್ಳೆಯ ರೀತಿಯಲ್ಲಿ ನಡೆಯಬೇಕು. ಇದಕ್ಕೆ ಎಲ್ಲಾ ಜನರ ಸಹಕಾರ ಬೇಕು. ಎಲ್ಲಾ ಪಕ್ಷದವರು ಸೇರಿಕೊಂಡು ಒಂದೇ ಮನಸ್ಸಿನಿಂದ ಸಹಕಾರ ಕೊಡಬೇಕು. ದಕ್ಷಿಣ ಕನ್ನಡ ಉಡುಪಿ ಅವಿಭಜಿತ ಜಿಲ್ಲೆಯ ಬಂಧುಗಳಿಂದ ಈ ಕ್ರೀಡೆ ದೇಶಕ್ಕೆ ಪರಿಚಯ ಮಾಡುವ ಕಾರ್ಯ ಆಗಲಿದೆ ಎಂದು ಹೇಳಿದರು.
ಈ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯ ಶೇಖರ್ ನಾರಾವಿ, ಕಂಬಳ ಸಮಿತಿಯ ಮುರಳೀಧರ ರೈ ಮಠಂತಬೆಟ್ಟು, ಪಂಜಿಗುಡ್ಡೆ ಈಶ್ವರ ಭಟ್, ಪ್ರಸನ್ನ ಕುಮಾರ್ ರೈ, ಕಂಬಳ ಸಮಿತಿ ಉಮೇಶ್ ಕರ್ಕೆರ, ಕೋಣದ ಮಾಲಕ ಕೇಶವ ಕೈಪ, ಸಮಿತಿ ಕೃಷ್ಣಪ್ರಸಾದ್ ಆಳ್ವ, ಶಿವರಾಮ ಆಳ್ವ, ರಂಜಿತ್ ಬಂಗೇರ ಸಹಿತ ಕಂಬಳದ ಕೋಣಗಳ ಮಾಲಕರುಗಳು ಉಪಸ್ಥಿತರಿದ್ದರು.