ಬೆಳ್ತಂಗಡಿ: ಉಜಿರೆಯ ಆನಂದ ಆಚಾರ್ಯ ಅವರ ಮಾಲಕತ್ವದ ಶ್ರೀ ಶಾರದ ಜುವೆಲ್ಲರ್ಸ್ ನಿಂದ ಚಿನ್ನಾಭರಣ ಕಳವಿಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಕಳ್ಳರು ಜ್ಯುವೆಲ್ಲರ್ಸ್ ಹತ್ತಿರದ ಅಂಗಡಿಗಳ ಮೂಲಕ ನುಗ್ಗುವ ಯತ್ನ ನಡೆಸಿದ್ದಾರೆ.
ಕಳ್ಳರು ಉಜಿರೆಯ ಮುಖ್ಯ ಪೇಟೆಯಲ್ಲಿಯಲ್ಲಿರುವ ಸಂಜೀವರವರ ಮಾಲಕತ್ವದ ಶ್ರೀ ಧನ್ವಂತರಿ ಮೆಡಿಕಲ್ ನ ಶಟರ್ ಎತ್ತಿದ ಬಳಿಕ ಮಣ್ಣಿನ ಗೋಡೆಯನ್ನು ಕೊರೆದು ಅದಕ್ಕೆ ಹೊಂದಿಕೊಂಡ ವಾಮನ ಬೆಂಡೆಯವರ ಮಾಲಕತ್ವದ ಶ್ರೀನಿಧಿ ಸ್ಟೋರ್ ನ ಗೋಡಾನ್ ಗೆ ಬಂದು ಅಲ್ಲಿ ಗೋಡಾನ್ನ ಶೀಟನ್ನು ತೆಗೆದು ಶ್ರೀ ಶಾರದ ಜುವೆಲ್ಲರ್ಗೆ ನುಗ್ಗಲು ಯತ್ನಿಸಿದ್ದಾರೆ. ಜ್ಯುವೆಲ್ಲರ್ಸ್ ಗೆ ನುಗ್ಗಲು ಸಾಧ್ಯವಾಗದಿದ್ದಾಗ ಜುವೆಲ್ಲರ್ನ ಗೋಡೆಯನ್ನು ಕೊರೆಯಲು ಆರಂಭಿಸಿದ್ದು, ಆದರೆ ಜ್ಯುವೆಲ್ಲರ್ಸ್ ನ ಮಾಲಕರು ತಮ್ಮ ಕಟ್ಟಡದ ಮೇಲ್ಬಾವಣಿ ಹಾಗೂ ಗೋಡೆಗೆ ಕಬ್ಬಿಣದ ತಗಡನ್ನು ಅಳವಡಿಸಿರುವುದರಿಂದ ಕಳ್ಳರಿಗೆ ಗೋಡೆಯನ್ನು ಕೊರೆಯಲು ಸಾಧ್ಯವಾಗಿರಲಿಲ್ಲ.
ಈ ಘಟನೆಯಿಂದ ಧನ್ವಂತರಿ ಮೆಡಿಕಲ್ ನ ಕೆಲ ಔಷಧಗಳಿಗೆ ಹಾನಿಯಾಗಿದ್ದು, ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.