ಚಿಕ್ಕಮಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಕಳೆದ ಐದು ತಿಂಗಳಿಂದ ಸುಮಾರು 30ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿರುವ ಪ್ರಕರಣ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಬಾಲಕಿಯನ್ನು ಜಿಲ್ಲೆಯ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಬಾಲಕಿ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನವಳು. ತಾಯಿ ತೀರಿಕೊಂಡ ಬಳಿಕ ತಂದೆ ಮತ್ತೊಂದು ಮದುವೆಯಾಗಿ ಅಲ್ಲೇ ವಾಸವಿದ್ದಾನೆ.
ನೊಂದ ಬಾಲಕಿ ಓದು ಮುಂದುವರೆಸಲು ಚಿಕ್ಕಮ್ಮ ಎಂದು ಹೇಳಿಕೊಳ್ಳುತ್ತಿದ್ದ ಗೀತಾ ಎಂಬವರೊಂದಿಗೆ ಶೃಂಗೇರಿಯಲ್ಲಿ ವಾಸವಿದ್ದಳು. ಈ ವೇಳೆ ಚಿಕ್ಕಮ್ಮನ ಜೊತೆ ಕ್ರಷರ್ ಕೆಲಸಕ್ಕೆ ಹೋಗಿದ್ದಾಗ ಆಕೆಯ ಮೇಲೆ ಸ್ಥಳೀಯ ಯುವಕ ಅತ್ಯಾಚಾರ ಎಸಗಿದ್ದ.
ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಮೊಬೈಲ್ನಲ್ಲಿ ಕೃತ್ಯವನ್ನು ಸೆರೆ ಹಿಡಿದು ತನ್ನೊಂದಿಗೆ ಸಹಕರಿಸಿದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನ ಹರಿಬಿಡುವುದಾಗಿ ಬೆದರಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತರು ಹಾಗೂ ಪರಿಚಿತರಿಂದಲೂ ಅತ್ಯಾಚಾರ ಎಸಗಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಸೆಪ್ಟೆಂಬರ್ನಿಂದ ಸುಮಾರು 30ಕ್ಕೂ ಹೆಚ್ಚು ಜನ ಅತ್ಯಾಚಾರ ಎಸಗಿದ್ದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ರವರು ನೀಡಿದ ದೂರಿನನ್ವಯ ಶೃಂಗೇರಿ ಠಾಣೆಯಲ್ಲಿ 17 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆಂದು ಬಾಲಕಿಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಗೀತಾ ಎಂಬುವರ ಮೇಲೂ ಕೇಸು ದಾಖಲಾಗಿದೆ. ಬಾಲಕಿ ಮೇಲೆ ಅತ್ಯಾಚಾರಗೈದವರಲ್ಲಿ ಕೆಲವರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.