ನವದೆಹಲಿ: ಕೊರೊನಾದ ಕರಿ ನೆರಳು ಈ ವರ್ಷ ರಾಷ್ಟ್ರಹಬ್ಬ ಗಣರಾಜ್ಯೋತ್ಸವದ ಮೇಲೂ ಬಿದ್ದಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿ ಗಣರಾಜ್ಯೋತ್ಸವ ಪರೇಡ್ ಹಿಂದಿನದಕ್ಕಿಂತ ಸ್ವಲ್ಪ ಭಿನ್ನವಾಗಿರಲಿದೆ.
ರಾಜಪಥ್ನಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿತವಾಗಲಿದೆ. ಪ್ರೇಕ್ಷಕರ ಸಂಖ್ಯೆಯನ್ನು 1 ಲಕ್ಷದ 15 ಸಾವಿರದಿಂದ 25 ಸಾವಿರಕ್ಕೆ ಇಳಿಸಲಾಗಿದೆ. ಅಲ್ಲದೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಬಾರಿ ಗಣರಾಜ್ಯೋತ್ಸವ ಪರೇಡ್ಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪರೇಡ್ನ ಹಾದಿ ಕೂಡ ಚಿಕ್ಕದಾಗಿರಲಿದ್ದು, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಕಾಂಟಿಂಜೆಂಟ್ಸ್ ಪ್ರಮಾಣವನ್ನ ಇಳಿಕೆ ಮಾಡಲಾಗಿದೆ.
ಈ ಹಿಂದೆ ಸುಮಾರು 8.2 ಕಿ.ಮೀ ದೂರ ಪಥಸಂಚಲನ ನಡೆಯುತ್ತಿತ್ತು. ಆದರೆ ಈ ವರ್ಷ ಅದನ್ನು 3.3 ಕಿ.ಮೀಗೆ ಇಳಿಸಲಾಗಿದೆ. ವಿಜಯ್ ಚೌಕ್ನಿಂದ ಶುರುವಾಗಲಿರುವ ಪರೇಡ್, ನ್ಯಾಷನಲ್ ಸ್ಟೇಡಿಯಂ ಬಳಿ ಕೊನೆಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ ಬರುವ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ, ಮಾಸ್ಕ್ ಧರಿಸುವಂತೆ ನಿಗಾ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.