’ಶ್ರೀ ಸಿದ್ದಿವಿನಾಯಕ’ ಮನೆಯ ಅದ್ದೂರಿ ಗೃಹಪ್ರವೇಶ: ಹಲವು ಗಣ್ಯರು ಭಾಗಿ
ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ನೂಜಿ ನಿವಾಸಿ ಸೇಸಮ್ಮ ಎಂಬ ಬಡ ಕುಟುಂಬಕ್ಕೆ ಧರ್ಮನಗರ ಶ್ರೀ ಸಿದ್ದಿವಿನಾಯಕ ಯುವಕ ಮಂಡಲದ ಆಶ್ರಯದಲ್ಲಿ ಎಲ್ಲಾ ಸದಸ್ಯರ ಶ್ರಮ ಸೇವೆ ಹಾಗೂ ದಾನಿಗಳ ಸಹಕಾರದಿಂದ ನೂತನ ಮನೆ ನಿರ್ಮಿಸಿಕೊಡಲಾಗಿದೆ. ಇದೀಗ ಈ ಮನೆಯ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಶ್ರೀ ಸಿದ್ದಿವಿನಾಯಕ ಎಂಬ ನಾಮದೊಂದಿಗೆ ನೂತನ ಮನೆಯ ಗೃಹಪ್ರವೇಶವನ್ನು ಸಿದ್ದಿವಿನಾಯಕ ಯುವಕ ಮಂಡಲದ ಸದಸ್ಯರೆಲ್ಲರೂ ಜೊತೆಗೂಡಿಕೊಂಡು, ಊರಿನವರ ಸಹಕಾರದೊಂದಿಗೆ ಕುಟುಂಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.
ಬೆಳಗ್ಗೆ ಗಣಪತಿ ಹವನದ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಶ್ರೀ ಸಿದ್ದಿವಿನಾಯಕ ಯುವಕ ಮಂಡಲದ ಅಧ್ಯಕ್ಷ ರಂಜಿತ್ ಕುಮಾರ್ ನೆಕ್ಕರೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಸುಧಾಕರ ಶೆಟ್ಟಿ ಬೀಡಿನಮಜಲು,ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ ನಿ. , ಸಂಕಪ್ಪ ಪೂಜಾರಿ ಮಂಗಳೂರು, ವಸಂತ್ಕುಮಾರ್ ಅಮೈ ಪ್ರಗತಿಪರ ಕೃಷಿಕರು, ಪುನೀತ್ ಮಾಡತ್ತಾರು ಅಧ್ಯಕ್ಷರು ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್, ಪದ್ಮನಾಭ ಕೊಡಂಚರೆಪಾಲು ಉಪಾಧ್ಯಕ್ಷರು ಇಡ್ಕಿದು ಗ್ರಾಮ ಪಂಚಾಯತ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ನೂತನ ಮನೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಿವಿನಾಯಕ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ಧನ ಕಾರ್ಯಾಡಿ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಶ್ರೀ ಸಿದ್ದಿವಿನಾಯಕ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕಾರ್ತಿಕ್ ಶೆಟ್ಟಿ ಮೂಡೈಮಾರ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಮೂಡೈಮಾರ್ ವಂದಿಸಿದರು. ಜೈದೀಪ್ ಅಮೈ ಕಾರ್ಯಕ್ರಮ ನಿರೂಪಿಸಿದರು.
ಕಲಾತಪಸ್ವಿ ಕಲಾ ತಂಡದಿಂದ ಭಜನಾ ಸೇವೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆದು ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ (ರಿ) ಶೃಂಗೇರಿ ಕಲಾವಿದರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.