ಬೆಂಗಳೂರು: ಜತೆಯಲ್ಲಿದ್ದವರೇ ಬೆನ್ನಿಗೆ ಚೂರಿ ಹಾಕಿದ್ರು ಎಂದು ಅನ್ನಿಸುತ್ತಿದೆ ಅಂತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಡಿಸಿಪಿ ರವಿಕುಮಾರ್ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಖಂಡ ಶ್ರೀನಿವಾಸ ಮೂರ್ತಿ ಇಂದು ಸಿಸಿಬಿ ಡಿಸಿಪಿ ರವಿಕುಮಾರ್ ಅವರನ್ನು ಭೇಟಿ ಮಾಡಿದ್ರು. ಸುಮಾರು ಅರ್ಧ ಗಂಟೆಗಳ ಕಾಲ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನೇರವಾಗಿ ನಿಮ್ಮನ್ನೇ ಟಾರ್ಗೆಟ್ ಮಾಡಲು ಪ್ಲ್ಯಾನ್ ಮಾಡಿರುವ ಬಗ್ಗೆ ಮೊದಲೇ ನಿಮಗೆ ಅನುಮಾನವಿತ್ತಾ ಎಂದು ಡಿಸಿಪಿ ಪ್ರಶ್ನೆ ಕೇಳಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಅಖಂಡ ಶ್ರೀನಿವಾಸ ಮೂರ್ತಿ, ಜತೆಯಲ್ಲಿದ್ದರೇ ನನ್ನ ಬೆನ್ನಿಗೆ ಚೂರಿ ಹಾಕಿದ್ರು ಅನ್ನಿಸುತ್ತಿದೆ. ಮೊದಲಿನಿಂದಲೂ ನನಗೆ ಯಾರ ಮೇಲೂ ಅನುಮಾನವಿರಲಿಲ್ಲ. ಹೀಗೆ ಆಗುತ್ತದೆ ಎಂದು ನಾನಂತೂ ಅಂದುಕೊಂಡಿರಲಿಲ್ಲ. ಜತೆಯಲ್ಲಿದ್ದವರೇ ಗಲಭೆ ಮಾಡಿದ್ದಾರೆ ಎನ್ನಿಸುತ್ತಿದೆ ಎಂದು ಡಿಸಿಪಿ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.