ಬೆಂಗಳೂರು ರಾಜ್ಯದಲ್ಲಿ ಕೊರೋನಾ ನಡುವೆಯೂ ಶಾಲೆ ಆರಂಭಿಸುವ ಕುರಿತಾಗಿ ಸಮಾಲೋಚನೆ ನಡೆದಿದೆ.ಕಾಲೇಜುಗಳ ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದ್ದು ಶಾಲೆಗಳನ್ನು ಕೂಡ ಆರಂಭಿಸಲು ಸಾಧಕ-ಬಾಧಕಗಳ ಬಗ್ಗೆ ಸರಣಿ ಚರ್ಚೆ ನಡೆಸಲಾಗಿದೆ.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು ಶಾಲಾಭಿವೃದ್ಧಿ ಸಮಿತಿ ಪೋಷಕರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ.ಸರಣಿ ಚರ್ಚೆಗಳ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಇಲಾಖೆ ಆಯುಕ್ತ ಅನ್ಬುಕುಮಾರ್ ನೀಡಲಿದ್ದಾರೆ. ಬಳಿಕ ಈ ವರದಿಯನ್ನು ಸಿಎಂ ಯಡಿಯೂರಪ್ಪ ಅವರಿಗೆ ನೀಡಲಿದ್ದು. ಇಂದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದರೊಂದಿಗೆ ರಾಜ್ಯದಲ್ಲಿ ಮೊದಲ ಹಂತದಲ್ಲಿ 9 ಮತ್ತು 10ನೇ ತರಗತಿಗಳಿಗೆ ಶಾಲೆ ಆರಂಭಿಸಲು ಚಿಂತನೆ ನಡೆದಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ವರದಿ ಸಿದ್ಧಪಡಿಸಲಾಗಿದ್ದು ಶಾಲೆ ಆರಂಭದ ಶಿಫಾರಸು ಮಾಡಲಿದೆ. ಆರೋಗ್ಯ ಇಲಾಖೆಯ ಸಲಹೆಗಳನ್ನು ಕೂಡ ಪರಿಗಣಿಸಿ ವರದಿ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಶಾಲೆ ಆರಂಭಕ್ಕೆ ಮೊದಲು ಹಾಸ್ಟೆಲ್ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ಬಹುತೇಕ ಪೋಷಕರಿಗೆ ಆತಂಕ ಶುರುವಾಗಿದೆ. ಸಾಕಷ್ಟು ಪೋಷಕರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಶಾಲೆ ಆರಂಭಿಸಿದ್ದರಿಂದ ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉಂಟಾಗಿರುವ ಅವಾಂತರಗಳಿಂದಾಗಿ ಪೋಷಕರು ಇನ್ನಷ್ಟು ಆತಂಕಕ್ಕೆ ಈಡಾಗಿದ್ದಾರೆ. ಈಗಾಗಲೇ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಶಾಲೆ ಡಿಸೆಂಬರ್ ಅಂತ್ಯದವರೆಗೆ ಶಾಲೆ ಆರಂಭಿಸದಿರಲು ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಪೋಷಕರಿಂದ ಇಷ್ಟೆಲ್ಲಾ ಆತಂಕ ವ್ಯಕ್ತವಾಗಿದ್ದರೂ ಶಿಕ್ಷಣ ಇಲಾಖೆ ಶಾಲೆ ಆರಂಭಿಸಲು ಉತ್ಸಾಹವನ್ನು ಹೊಂದಿದೆ.