



ಕನ್ನಡದ ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ಅವರು ಸ್ಟೇಡಿಯಂ ಬಳಿ ತಮಗಾದ ಅನುಭವವನ್ನು ವಿಡಿಯೋ ಮೂಲಕ ಶೇರ್ ಮಾಡಿ ಕಾಲ್ತುಳಿತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅವರು ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿನ ಘಟನೆ ಹೇಗಿತ್ತು ಎನ್ನುವುದನ್ನು ಕೂಡಾ ವಿವರಿಸಿದ್ದಾರೆ.
ಬೆಳಗಿಂದ ತುಂಬಾ ಖುಷಿಯಾಗಿದ್ದೆ. 18 ವರ್ಷಗಳಿಂದ ಕಾದ ದಿನ ಬಂತು ಅಂತ ಖುಷಿಯಾಗಿದ್ದೆ. ನಾನು ಆ ಕ್ರೌಡ್ ಮಧ್ಯದಲ್ಲಿ ಹೋಗಿ ಬಂದೆ. ನನಗೂ ಪಾಸ್ ಸಿಕ್ಕಿತ್ತು. ಗೇಟ್ 3 ಮೂಲಕ ಹೋಗ್ಬೇಕಾಗಿತ್ತು. ಆದರೆ ಒಳಗೆ ಹೋಗೋದು ಬಿಟ್ಟು, ಗೇಟ್ ಬಳಿ ಕೂಡಾ ಹೋಗೋಕೆ ಆಗಲಿಲ್ಲ ಎಂದಿದ್ದಾರೆ.
ಅಲ್ಲಿಂದ ಹೇಗೋ ಮಾಡಿ ಗೇಟ್ ನಂಬರ್ 10 ಹತ್ತಿರ ಬಂದೆ. ಅಲ್ಲಿ ಇನ್ನೂ ತುಂಬಾ ತುಂಬಾ ಕ್ರೌಡ್ ಇತ್ತು. ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡೋಕೆ ಕಷ್ಟ ಆಯ್ತು. ಅದೆಷ್ಟು ಕಷ್ಟ ಆಗಿರಬಹುದು ಎನ್ನುವುದು ನನಗೆ ಅನಿಸಿತು. ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ತುಂಬಾ ಬೇಜಾರಾಗ್ತಿದೆ. ಇದಕ್ಕೆ ಯಾರು ಹೊಣೆ ಅಂತ ಹೇಳೋಕೆ ಕಷ್ಟ ಆಗ್ತಿದೆ, ಸರಿಯಾಗಿ ಆರ್ಗನೈಸ್ ಮಾಡಿಲ್ವಾ? 18 ವರ್ಷಗಳ ಕಾಲ ಕಾದಿರುವಂತಹ ಈ ದಿನದ ಎಕ್ಸೈಟ್ಮೆಂಟ್ ಹೀಗಿರುತ್ತೆ ಅಂತ ಯಾರಿಗೂ ಗೊತ್ತಿರಲಿಲ್ಲ ಅನಿಸುತ್ತೆ.
ಇನ್ನೊಂದೆರಡು ದಿನ ಬಿಟ್ಟು ಶನಿವಾರ, ಭಾನುವಾರ ಇವೆಂಟ್ ಆರ್ಗನೈಸ್ ಮಾಡ್ಬೋದಾಗಿತ್ತು. ಟಿಕೆಟ್ ಇಟ್ಟು ಆಗ ಕಾರ್ಯಕ್ರಮ ಆಯೋಜಿಸಬಹುದಾಗಿತ್ತು. ಇನ್ನೂ ಯಾರ್ಯಾರು ಐಸಿಯುನಲ್ಲಿದ್ದಾರೋ ಅವರೆಲ್ಲ ಹುಷಾರಾಗಿ ಬರಲಿ ಎಂದು ಹೇಳಿದ್ದಾರೆ.
ಚಂದನ್ ಶೆಟ್ಟಿ ಅವರು ಅತ್ಯಂತ ನೋವಿನಿಂದ ವಿಡಿಯೋ ಶೇರ್ ಮಾಡಿದ್ದು ತಮಗಾದ ಅನುಭವವನ್ನು ರಿವೀಲ್ ಮಾಡಿದ್ದಾರೆ. ತನಗೇ ಅಲ್ಲಿ ಉಸಿರಾಡೋಕೆ ಕಷ್ಟವಾಗುವಂತಹ ಘಟನೆ ನಡೆಯಿತು. ಮೃತಪಟ್ಟವರ ಸ್ಥಿತಿ ಹೇಗಿರುತ್ತೆ ಎಂದು ನನಗೆ ಊಹಿಸಬಹುದು ಎಂದು ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಆರ್ಸಿಬಿ ಟೀಮ್ ಬೆಂಗಳೂರಿಗೆ ತಲುಪಿದಾಗ ಆರ್ಸಿಬಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಿಪರೀತ ಸಂಖ್ಯೆಯಲ್ಲಿ ಜನರು ಆಗಮಿಸಿದ ಬೆನ್ನಲ್ಲಿ ಈ ರೀತಿಯ ಘಟನೆ ನಡೆದಿದೆ.
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ದೊಡ್ಡ ದುರಂತವೇ ಸಂಭವಿಸಿದೆ. ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








