ನವದೆಹಲಿ: ರಾಷ್ಟ್ರಗೀತೆಯಲ್ಲಿ ಬದಲಾವಣೆ ಮಾಡುವ ಬಹುದಿನಗಳ ಬೇಡಿಕೆಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೆ ಮುನ್ನೆಲೆಗೆ ತಂದಿದ್ದು ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.
ಪತ್ರದಲ್ಲಿ ರಾಷ್ಟ್ರಗೀತೆಯಲ್ಲಿರುವ ‘ಜನಗಣಮನ’ ಬದಲಾಗಿ 1943ರಲ್ಲಿ ಸುಭಾಷ್ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಅರ್ಮಿ ಸಂಯೋಜನೆ ಮಾಡಿದ್ದ ಪದಗಳನ್ನು ಬದಲಿಸುವಂತೆ ಕೋರಿದ್ದಾರೆ. ಎರಡು ಪುಟಗಳ ಪತ್ರದಲ್ಲಿ ಸ್ವಾಮಿ, ಮಾಜಿ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು 1949ರ ಸದನದಲ್ಲಿ ನೀಡಿದ್ದ ಭರವಸೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ.
1943ರ ಅಕ್ಟೋಬರ್ 21 ರಂದು ಐಎನ್ಎ ಭಾರತದ ಸ್ವತಂತ್ರ್ಯ ಘೋಷಣೆ ಮಾಡಿದ ಸಂದರ್ಭದಲ್ಲಿ ಗೀತೆಯನ್ನು ಹಾಡಿದ್ದರು. ಅಂದು ಸುಭಾಷ್ಚಂದ್ರ ಬೋಸ್ ಮುಂದಾಳತ್ವದ ಐಎನ್ಎ ಮಣಿಪುರ ರಾಜಧಾನಿ ಇಂಪಾಲ್ಅನ್ನು ವಶಕ್ಕೆ ಪಡೆದುಕೊಂಡು ಸ್ವತಂತ್ರ್ಯ ಘೋಷಣೆ ಮಾಡಿತ್ತು. ರವೀಂದ್ರನಾಥ ಠಾಗೋರ್ ಅವರು ರಚಿಸಿರುವ ಗೀತೆಯಲ್ಲಿ ಕೆಲ ಸಂದೇಹಗಳಿವೆ. 1947ರ ಭಾರತಕ್ಕೆ ಇದು ಸೂಕ್ತವಾಗಿಲ್ಲ. ಉದಾಹರಣೆಗೆ ಸಿಂಧ್ ಪದದ ಉಲ್ಲೇಖವು ರಾಷ್ಟ್ರಗೀತೆಯಲ್ಲಿದೆ. ಆದರೆ ಬೋಸರ ಮಾರ್ಗದರ್ಶನದಲ್ಲಿ ರಚನೆಯಾಗಿರುವ ಗೀತೆ ಸ್ವತಂತ್ರ್ಯ ಭಾರತಕ್ಕೆ ಹೆಚ್ಚು ಸೂಕ್ತವಾಗಿದೆ.
1949 ನವೆಂಬರ್ 26ರಂದು ಸದನದಲ್ಲಿ ರಾಜೇಂದ್ರ ಪ್ರಸಾದ್ ಅವರು ಆಡಿರುವ ಭಾಷಣದಲ್ಲಿ ರಾಷ್ಟ್ರಗೀತೆ ಬದಲಿಸುವ ಕುರಿತು ಮಾತನಾಡಿದ್ದಾರೆ. ರಾಷ್ಟ್ರಗೀತೆಯಾಗಿ ಜನಗಣಮನ ಹಾಗೂ ವಂದೇ ಮಾತರಂ ಗೀತೆಗಳು ಸಮಾನ ಸ್ಥಾನವನ್ನು ಹೊಂದಿದೆ ಎಂದಿದ್ದಾರೆ. ಆದರೆ ಪ್ರಸಾದ್ ಅವರು ಜನಗಣಮನವನ್ನು ಭವಿಷ್ಯದಲ್ಲಿ ಸೂಕ್ತ ಪದಗಳೊಂದಿಗೆ ಬದಲಾಯಿಸಬಹುದು ಎಂದಿದ್ದಾರೆ. ಆದ್ದರಿಂದಲೇ ಜನಗಣಮನ ಪದಗಳನ್ನು ತಿದ್ದುಪಡಿ ಮಾಡಲು ಅನುಮತಿಯನ್ನು ಸಂವಿಧಾನ ಸಭೆಯ ವಿಚಾರಣೆಯ ಭಾಗವಾಗಿ ಮಾಡಲಾಗಿದೆ ಎಂದು ಸ್ವಾಮಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
2021ರ ಜನವರಿ 26ರ ವೇಳೆಗೆ ಈ ಬದಲಾವಣೆ ಮಾಡಬಹುದು ಎಂಬ ವಿಶ್ವಾಸವಿದೆ. ಸರ್ಕಾರ ಈ ಕುರಿತು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸ್ವಾಮಿ ಹೇಳಿದ್ದಾರೆ. ಉಳಿದಂತೆ ರವೀಂದ್ರ ನಾಥ್ ಟ್ಯಾಗೋರ್ ಅವರ ಜನಗಣಮನ ಗೀತೆ 1911 ರಲ್ಲಿ ಕಿಂಗ್ ಜಾರ್ಜ್ V ಅವರು ಭಾರತಕ್ಕೆ ಬಂದಿಳಿದಾಗ ಅವರನ್ನು ಹೊಗಳುವ ಸ್ವಾಗತಾರ್ಹ ಹಾಡು ಎಂಬ ವಿವಾದಗಳನ್ನು ಎದುರಿಸುತ್ತಿತ್ತು. ಗೀತೆಯಲ್ಲಿರುವ ‘ಅಧಿನಾಯಕ’ ಪದ ಅವರನ್ನು ಹೊಗಳಲು ಬಳಕೆ ಮಾಡಲಾಗಿದೆ. ‘ಸಿಂಧ್’ ಭಾರತದ ಭಾಗವಲ್ಲ. ಆದ್ದರಿಂದಲೇ ಸುಭಾಷ್ಚಂದ್ರ ಬೋಸರು ವಿಜಯದ ಗೀತೆಯಾಗಿ ಕೆಲ ಬದಲಾವಣೆಗಳನ್ನು ಮಾಡಿದ್ದರು ಎನ್ನಲಾಗಿದೆ.
ನೇತಾಜಿಯ ಐಎನ್ಎ ಹಾಡಿನ ಸಾಹಿತ್ಯ ಇಂತಿದೆ:
ಸುಭ್ ಸುಖ್ ಚೈನ್ ಕಿ ಬರ್ಖಾ ಬಾರ್ಸೆ, ಭಾರತ್ ಭಾಗ್ ಹೈ ಜಾಗಾ.
ಪಂಜಾಬ್, ಸಿಂಧ್, ಗುಜರಾತ್, ಮರಾಠಾ, ದ್ರಾವಿಡ್, ಉತ್ಕಲ್, ವಂಗಾ
ಚಂಚಲ್ ಸಾಗರ್, ವಿಂಧ್ಯ, ಹಿಮಾಲಯ, ನೀಲಾ ಯಮುನಾ, ಗಂಗಾ
ತೇರೆ ನಿತ್ ಗುಣ್ ಗಯೆನ್, ತುಜ್ಸೆ ಜೀವನ್ ಪಾಯೆ,
ಸಬ್ ತನ್ ಪಾಯೆ ಆಶಾ.
ಸೂರಜ್ ಬಾನ್ ಕರ್ ಜಗ್ ಪಾರ್ ಚಮ್ಕೆ, ಭಾರತ್ ನಾಮ್ ಸುಭಾಗ,
ಜೈ ಹೋ! ಜೈ ಹೋ! ಜೈ ಹೋ! ಜೈ, ಜೈ, ಜೈ, ಜೈ ಹೋ!
My letter to PM Modi on Jana Gana Mana pic.twitter.com/qc1KnLDb2g
— Subramanian Swamy (@Swamy39) December 1, 2020