ಸುಬ್ರಹ್ಮಣ್ಯ: ಪ್ರಸ್ತುತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಅಪರ ಜಿಲ್ಲಾಧಿಕಾರಿ ರೂಪಾ ಅವರನ್ನು ಬದಲಾಯಿಸಲಾಗಿದ್ದು, ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರನ್ನು ನೇಮಕ ಮಾಡಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಆದೇಶದ ಪ್ರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ಅಧಿನಿಯಮ 1997 ರ ವಿಧಿ 29 ರನ್ವಯ ದೇವಾಲಯದ ದೈನಂದಿನ ಆಡಳಿತ ನಿರ್ವಹಣೆ ಹಾಗೂ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವ ಹಿತದೃಷ್ಟಿಯಿಂದ ಅಪರ ಜಿಲ್ಲಾಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ವ್ಯವಸ್ಥಾಪನಾ ಸಮಿತಿ ರಚನೆ ಆಗುವವರೆಗೂ ಅಥವಾ 6 ತಿಂಗಳ ಅವಧಿಯ ವರೆಗೆ ಇದರಲ್ಲಿ ಯಾವುದು ಮೊದಲೇ ಅಲ್ಲಿಯವರೆಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಅಪರ ಜಿಲ್ಲಾಧಿಕಾರಿಯವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಇರುವುದರಿಂದ ಹಾಗೂ ದೇವಸ್ಥಾನದಲ್ಲಿ ಡಿಸೆಂಬರ್ ತಿಂಗಳಲ್ಲಿ ಚಂಪಾ ಷಷ್ಠಿ ಉತ್ಸವ ಇರುವುದರಿಂದ, ಉತ್ಸವದ ಉಸ್ತುವಾರಿ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಲು ಸಾಧ್ಯವಾಗದಿರುವುದರಿಂದ, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಅಪರ ಜಿಲ್ಲಾಧಿಕಾರಿ ರೂಪ ರವರ ಬದಲಿಗೆ ಆಡಳಿತಾಧಿಕಾರಿ ಹುದ್ದೆಗೆ ಸಹಾಯಕ ಆಯುಕ್ತರು, ಪುತ್ತೂರು ಉಪವಿಭಾಗ, ಅವರನ್ನು ಜಿಲ್ಲಾಧಿಕಾರಿಗಳು ನೇಮಕಾತಿ ಮಾಡಿದ್ದಾರೆ.
ಡಾ.ಯತೀಶ್ ಉಳ್ಳಾಲ್ ಅವರು ಕಳೆದ ಬಾರಿಯ ಚಂಪಾ ಷಷ್ಠಿ ಸಂದರ್ಭದಲ್ಲೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜವಾಬ್ದಾರಿಯಲ್ಲಿದ್ದು,ಜಾತ್ರಾ ಉತ್ಸವವನ್ನು ಸುಸೂತ್ರವಾಗಿ ನೆರವೇರಿಸಲು ಕಾರಣಕರ್ತರಾಗಿದ್ದರು.