ಸುಳ್ಯ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಕೂಲಿ ಕಾರ್ಮಿಕ ರವಿ ಎಂಬವರನ್ನು ಹತ್ಯೆ ಮಾಡಿದ್ದ ಆರೋಪದಡಿ ಆರ್.ಡಿ.ಬಾಲಕೃಷ್ಣ ಎಂಬಾತನನ್ನು ಪೊಲೀಸರು ಸುಳ್ಯದಲ್ಲಿ ಬಂಧಿಸಿದ್ದಾರೆ.
ರವಿ ಮತ್ತು ಬಾಲಕೃಷ್ಣ ಕೂಲಿ ಕೆಲಸಕ್ಕಾಗಿ ನಾಪೆಕ್ಲುವಿನ ಇಂದಿರಾ ನಗರದ ಗಣೇಶ್ ಎಂಬವರಲ್ಲಿ ವಾಸವಾಗಿದ್ದರು. ಮಾ. 31 ರಂದು ಇವರು ಹೋಟೆಲ್ನಲ್ಲಿ ಊಟ ಮುಗಿಸಿ ಮಲಗಲು ಕೊಠಡಿಗೆ ಬಂದಾಗ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಬಾಲಕೃಷ್ಣ ರವಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.
ಈತನ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಆದೇಶದಂತೆ ಮಡಿಕೇರಿ ಡಿವೈಎಸ್ಪಿ ದಿನೇಶ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ನೇತೃತ್ವದಲ್ಲಿ ನಾಪೋಕ್ಲು ಠಾಣಾಧಿಕಾರಿ ಆರ್.ಕಿರಣ್, ಸಿಬ್ಬಂದಿಗಳಾದ ನವೀನ್, ಸಜನ್, ಮಧು, ಮತ್ತು ರವಿ ಮತ್ತಿತರರು ಕಾರ್ಯಾಚರಣೆ ನಡೆಸಿದ್ದರು. ಇದೀಗ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.