ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಇಬ್ಬರನ್ನ ಇಂದು ಬಂಧಿಸಿದ್ದಾರೆ. ಬೆಳ್ಳಾರೆ ಪಲ್ಲಿಮಜಲು ನಿವಾಸಿಗಳಾದ ಸದ್ದಾಂ (32ವ) ಮತ್ತು ಹಾರಿಸ್ (42ವ) ಬಂಧಿತ ಆರೋಪಿಗಳೆಂದು ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಅಧೀಕೃತವಾಗಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಅವರನ್ನು ಜು.28 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು . ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಪೊಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಕೇಳಿಕೊಂಡಂತೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು.
ಬಂಧನದ ಕುರಿತಂತೆ ಅಧೀಕೃತವಾಗಿ ಮಾಹಿತಿ ನೀಡಿದ ಎಸ್ಪಿ ಋಷಿಕೇಶ್ ಸೋನಾವಣೆ ಹೆಚ್ಚಿನ ಸಾಕ್ಷ್ಯಾ ಧಾರಗಳ ಆಧಾರದ ಮೇಲೆ ಸದ್ದಾಂ ಮತ್ತು ಹಾರಿಸ್ ಅನ್ನು ಬಂಧಿಸಲಾಗಿದೆ. ಇದುವರೆಗೆ ನಡೆಸಲಾದ ತನಿಖೆಯ ಆಧಾರದ ಮೇಲೆ, ತನಿಖಾ ತಂಡವು ಈ ಪ್ರಕರಣದಲ್ಲಿ ಶಂಕಿತ ಸಂಚುಕೋರರು ಮತ್ತು ಹಲ್ಲೆಕೋರರನ್ನು ಗುರುತಿಸಿದೆ. ತಲೆಮರೆಸಿಕೊಂಡವರ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.