ಕೋವಿಡ್-19 ಪ್ರತಿಬಂಧಕಾಜ್ಞೆಯ ಕಾರಣದಿಂದ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮ.
ಬಂಟ್ವಾಳ: ಸೋಣ ಅಮವಾಸ್ಯೆಯ ದಿನದಿಂದ ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯ ಇಂದು ಅಗಸ್ಟ್ 19 ರಂದು ನಡೆಯಿತು. ಸರಕಾರದ ಸುತ್ತೋಲೆಯಂತೆ ಈಬಾರಿ ಸರಳವಾಗಿ ಭಕ್ತಾದಿಗಳಿಗೆ ಗುಹಾತೀರ್ಥ ಸ್ನಾನಕ್ಕೆ ಅವಕಾಶ ನೀಡದೆ ಅನಾಧಿಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.
ಪರಶುರಾಮ ಸೃಷ್ಟಿ ಯ ನಮ್ಮ ತುಳುನಾಡಿನಲ್ಲಿ ಅತ್ಯಂತ ಅಪರೂಪದ ವಿಶಿಷ್ಟ ತೀರ್ಥ ಕ್ಷೇತ್ರ ಎನಿಸಿದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾ ತೀರ್ಥಕ್ಕೆ ಪ್ರಾರ್ಥನೆ ಸಲ್ಲಿಸಿ,ಕೇರ್ಪು ಇಟ್ಟು ದಾರ್ಮಿಕ ವಿಧಿ-ವಿದಾನವನ್ನು ನೆರವೇರಿಸಿ ಅರಸು ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಪಂಜುರ್ಲಿ ದೈವಗಳಿಗೆ ತಂಬಿಲ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ದೈವದ ಅರ್ಚಕರಾದ ಪಳನೀರು ಅನಂತ ಭಟ್ ವೆಂಕಟೇಶ್ ಮಯ್ಯ ,ಮಾಣಿಗುತ್ತು ಸಚಿನ್ ರೈ, ಮತ್ತು ಗ್ರಾಮಸ್ತರು ಸೀಮಿತ ಸಂಖ್ಯೆಯಲ್ಲಿ ಉಪಸ್ತಿತರಿದ್ದರು .
ಇಂದಿನಿಂದ 22-08-2020ನೇ ಶನಿವಾರ ಬಾದ್ರಪದ ಚೌತಿವರೆಗೆ ಗುಹಾ ತೀರ್ಥ ಸ್ನಾನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ ಇರುತಿತ್ತು .ಕೋವಿಡ್-19 ಪ್ರತಿಬಂಧಕಾಜ್ಞೆಯ ಕಾರಣದಿಂದ ಭಕ್ತಾದಿಗಳಿಗೆ ಗುಹಾ ಪ್ರವೇಶ ಹಾಗು ಗುಹಾತೀರ್ಥ ಸ್ನಾನ ಮಾಡುವುದು ಸಂಪೂರ್ಣವಾಗಿ ನಿಷೇಧಿಸಿರುವುದು ಪ್ರತೀ ವರ್ಷ ಬರುವ ಅಸಂಖ್ಯ ಭಕ್ತಾದಿಗಳಿಗೆ ಈ ವರ್ಷದ ಮಟ್ಟಿಗೆ ನಿರಾಸೆ ಮೂಡಿಸಿದೆ.