ಸುಳ್ಯ: ಚೆಂಬು ಗ್ರಾಮ ಪಂಚಾಯತ್ ಸದಸ್ಯೆ ದಬ್ಬಡ್ಕ ಕಮಲಾ ಅವರನ್ನು ನೆರೆಮನೆಯಾತ ಹಾಗೂ ಸಂಬಂಧಿಯಾಗಿದ್ದ ಮುತ್ತು ಎಂಬಾತ ಸೇತುವೆಯಿಂದ ಕೆಳಕ್ಕೆ ತಳ್ಳಿ ಬಳಿಕ ಇಬ್ಬರು ನಾಪತ್ತೆಯಾದ ಬಗ್ಗೆ ವರದಿಯಾಗಿದ್ದ ಪ್ರಕರಣ ದುರಂತ ಅಂತ್ಯ ಕಂಡಿದೆ.
ಮೃತ ವ್ಯಕ್ತಿಗಳು ಮಡಿಕೇರಿ ತಾಲೂಕಿನಲ್ಲಿರುವ ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ದಬ್ಬಡ್ಕ ಕಮಲಾ (35) ಹಾಗೂ ಕಮಲ ಜೊತೆ ನಾಪತ್ತೆಯಾಗಿದ್ದ ಮುತ್ತು(50) ಎನ್ನಲಾಗಿದೆ.
ಚೆಂಬು ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ದಬ್ಬಡ್ಕ ಕಮಲಾ ಅವರು ಸೆ.15 ರ ಬುಧವಾರ ಸಂಜೆ ತನ್ನ ಮನೆಯ ಸಮೀಪ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ಥಳೀಯ ಕೆಲವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮುತ್ತು ಎಂಬ ನೆರೆಮನೆಯಾತ ಆಕೆಯನ್ನು ಇದ್ದಕ್ಕಿದ್ದಂತೆ ದಬ್ಬಡ್ಕ ಸೇತುವೆಯಿಂದ ಕೆಳಗೆ ತಳ್ಳಿ ಹಾಕಿದ್ದರು ಎನ್ನಲಾಗಿತ್ತು ಘಟನೆ ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, ಕೆಳಕ್ಕೆ ಬಿದ್ದಿರುವ ಗ್ರಾ. ಪಂ. ಸದಸ್ಯೆ ಕಮಲ ಅವರ ಸುಳಿವು ಕೂಡ ದೊರೆತಿಲ್ಲ. ಸೇತುವೆಯಿಂದ ಮುತ್ತು ಕೆಳಕ್ಕೆ ಹೋಗಿ ಆಕೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿರಬಹುದು ಎಂದು ವದಂತಿ ಹರಿದಾಡುತ್ತಿತ್ತು.
ಇದೀಗ ಇಬ್ಬರ ಮೃತ ದೇಹ ಸಿಕ್ಕಿದ್ದು, ಕಮಲಾ ಮತ್ತು ಮುತ್ತು ಇಬ್ಬರು ಒಂದೇ ಮರದಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.