ಸುಳ್ಯ: ಯುವಕನೊಬ್ಬ ತನ್ನ ಪತ್ನಿಯನ್ನು ತವರು ಮನೆಗೆ ಬಿಟ್ಟು ಬರಲೆಂದು ಪಕ್ಕದ ಮನೆಯ ಕಾರು ಪಡೆದುಕೊಂಡು ಹೋಗಿ ಅದೇ ಕಾರನ್ನು ಬೆಂಗಳೂರಿನಲ್ಲಿ ಮಾರಾಟಮಾಡಿ ಮುಂಬೈಗೆ ಎಸ್ಕೇಪ್ ಆದ ಘಟನೆ ನಡೆದಿದೆ.
ಕಾರು ಮಾರಿ ಪರಾರಿಯಾದ ವ್ಯಕ್ತಿ ಜಟ್ಟಿಪಳ್ಳ ಬೊಳಿಯಮಜಲು ಬಳಿ ವಾಸವಿದ್ದ ಅಶ್ರಫ್ ಯಾನೆ ಅಪ್ಪಿ.
ತನ್ನ ಪತ್ನಿಯನ್ನು ವಿರಾಜಪೇಟೆಯಲ್ಲಿರುವ ಆಕೆಯ ತವರು ಮನೆಗೆ ಬಿಟ್ಟುಬರಲು ಪಕ್ಕದ ಮನೆಯಲ್ಲಿ ಬಾಡಿಗೆ ರೂಂನಲ್ಲಿ ವಾಸವಿದ್ದ ಕಲಂದರ್ ಎಂಬವರ ಬಳಿ ಕಾರನ್ನು ಪಡೆದುಕೊಂಡಿದ್ದನು. ಆದರೆ ಆತ ಕತ್ತಲಾದರೂ ಹಿಂತಿರುಗಿ ಬಾರದಿದ್ದಾಗ ಕಲಂದರ್ ಆತನಿಗೆ ಫೋನ್ ಮೂಲಕ ಸಂಪರ್ಕಿಸಿದನು. ಪೋನ್ ಸಂಪರ್ಕಕ್ಕೆ ಸಿಕ್ಕಿದ ಆತ ಮದುವೆ ಕಾರ್ಯಕ್ರಮವೊಂದರಲ್ಲಿದ್ದು, ರಾತ್ರಿ ಬರುವುದಾಗಿ ಹೇಳಿ ನಂತರ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ. ಮರುದಿನ ಬೆಳಿಗ್ಗೆ ಕಾರು ಹುಡುಕಲು ಕಲಂದರ್ ಅವರು ಅಶ್ರಫ್ನ ತಂದೆಯೊಂದಿಗೆ ವಿರಾಜಪೇಟೆ ತೆರಳಿದರೂ ಸಿಗದ ಹಿನ್ನೆಲೆಯಲ್ಲಿ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಅದೇ ದಿನ ಸಂಜೆ ವೇಳೆಗೆ ಬೆಂಗಳೂರಿನಿಂದ ಸಯ್ಯದ್ ಯಾಸಿಮ್ ಎಂಬ ವ್ಯಕ್ತಿಯೊಬ್ಬರು ಕಲಂದರ್ ಅವರ ಮೊಬೈಲ್ ಫೋನ್ಗೆ ಕರೆ ಮಾಡಿ, “ಕಾರಿನ ಆರ್.ಸಿ. ಮಾಲಕ ನೀವಾ ಈ ಕಾರನ್ನು ಅಶ್ರಫ್ ಅವರು ನಮಗೆ 40 ಸಾವಿರಕ್ಕೆ ಮಾರಾಟ ಮಾಡಿದ್ದಾರೆ” ಎಂದು ಹೇಳಿದ್ದು, ಈ ವಿಷಯವನ್ನು ಸುಳ್ಯದ ಪೊಲೀಸರ ಮೂಲಕ ಬೆಂಗಳೂರಿನ ಪೊಲೀಸರಿಗೆ ತಿಳಿಸಿದರು. ಹಿಂದೆ ಸುಳ್ಯದಲ್ಲಿದ್ದ ಈಗ ಬೆಂಗಳೂರಲ್ಲಿರುವ ಎಸ್.ಐ.ಮಂಜುನಾಥರ ಮೂಲಕ ಕಾರ್ಯಾಚರಣೆ ನಡೆಸಿ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಶ್ರಫ್ ಇದು ತನ್ನ ಮಾವನ ಕಾರೆಂದು ಹೇಳಿ ಸಯ್ಯದ್ ಯಾಸಿಂರವರಿಂದ 10 ಸಾವಿರ ರೂ.ಪಡೆದುಕೊಂಡು ಕಾರು ನೀಡಿ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.