ಸೂರ್ಯಪೇಟೆ: ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸಬೇಕಾದ ತಾಯಿಯೊಬ್ಬಳು ಮೌಢ್ಯಕ್ಕೆ ಮರುಳಾಗಿ ಹತ್ತೆ ಮಗುವನ್ನೇ ಬಲಿ ನೀಡಿರುವ ಭಯಾನಕ ಘಟನೆ ತೆಲಂಗಾಣದ ಸೂರ್ಯಪೇಟೆಯ ಮೆಕಲಪಟಿ ತಾಂಡಾದಲ್ಲಿ ಗುರುವಾರ ಸಂಜೆ ನಡೆದಿದೆ.
ಪತ್ನಿಯ ಮೌಢ್ಯತೆ ಕಂಡು ಪತಿ ಆಘಾತಕ್ಕೆ ಒಳಗಾಗಿದ್ದಾನೆ. ಇತ್ತ ಮಗುವೂ ಇಲ್ಲ ಅತ್ತ ಪತ್ನಿ ಜೈಲು ಪಾಲಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೆಕಲಪಟಿ ಮೂಲದ ಕೃಷ್ಣ ಭಾರತಿ ಅಲಿಯಾಸ್ ಲಾಸ್ಯ ಎಂಬಾಕೆಯನ್ನು ಮದುವೆ ಆಗಿದ್ದಾನೆ. ಕೃಷ್ಣ ವೃತ್ತಿಯಲ್ಲಿ ರೈತ, ಅವರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಹೆಣ್ಣು ಮಗು ಜನಿಸಿತ್ತು.
ಪೂಜಾರಿ ಒಬ್ಬನ ಮಾತು ನಂಬಿದ ಭಾರತಿ, ಮೌಢ್ಯಗಳಲ್ಲಿ ಭಾರಿ ನಂಬಿಕೆ ಹೊಂದಿದ್ದಳು. ಪೂಜಾರಿಯು ನಿನಗೆ ನಾಗದೋಷವಿದೆ, ಹೀಗಾಗಿ ನಾಗಪೂಜೆ ಮಾಡಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದ್ದ. ಈ ಭಯದಿಂದ ಹೊರಬರಲು ಏನು ಮಾಡಬೇಕೆಂದು ಕೇಳಿದಾಗ ಪೂಜಾರಿ ಪೂಜೆ ಮಾಡಲು ಹೇಳಿದ್ದು, ಅಲ್ಲದೆ, ಹೆಣ್ಣು ಅಥವಾ ಗಂಡು ಮಗುವಾಗಲಿ ಹುಟ್ಟಿದಾಗ ಅದನ್ನು ಸಹ ತ್ಯಾಗ ಮಾಡಬೇಕು ಎಂದು ಪೂಜಾರಿ ಹೇಳಿದ್ದ. ಇದನ್ನೇ ಬಲವಾಗಿ ನಂಬಿದ ಭಾರತಿ ಅಂದಿನಿಂದ ವಾರಕ್ಕೆ 2 ಅಥವಾ 3 ದಿನ ನಾಗಪೂಜೆ ಮಾಡಲು ಆರಂಭಿಸಿದಳು.
ಹೀಗಿರುವಾಗ ಗುರುವಾರ ಕೆಲಸದ ಮೇಲೆ ಕೃಷ್ಣ ಸೂರ್ಯಪೇಟೆಗೆ ತೆರಳಿದ್ದಾನೆ. ಆದರೆ, ಪತ್ನಿ ವರ್ತನೆ ಬಗ್ಗೆ ಮೊದಲೇ ಅನುಮಾನ ಹೊಂದಿದ್ದ ಕೃಷ್ಣ ತನ್ನ ಅತ್ತೆ ಮನೆಯವರಿಗೆ ಭಾರತಿಯನ್ನು ನೋಡಿಕೊಳ್ಳಲು ಹೇಳಿ ಹೋಗಿರುತ್ತಾನೆ. ಇತ್ತ ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದ ಭಾರತಿ ಚಾಕುವಿನಿಂದ ಮಗುವನ್ನು ಕೊಂದಿರುತ್ತಾಳೆ. ಇತ್ತ ಮನೆಗೆ ಮಗಳನ್ನು ನೋಡಿಕೊಳ್ಳಲು ಬಂದ ಭಾರತಿಯ ತಾಯಿ ಮಗುವಿನ ಸ್ಥಿತಿ ಕಂಡು ಬೆಚ್ಚಿಬೀಳುತ್ತಾರೆ.
ಭಾರತಿ ದೇವರ ಫೋಟೋ ಮುಂದೆಯೇ ತನ್ನೆಲ್ಲ ಕೆಲಸವನ್ನು ಮಾಡಿರುತ್ತಾಳೆ. ನಾಗಪೂಜೆ ಹೇಗೆ ಮಾಡಬೇಕೆಂಬುದನ್ನು ಯೂಟ್ಯೂಬ್ನಲ್ಲಿ ನೋಡಿರುತ್ತಾಳೆ. ಆಘಾತಕಾರಿ ವಿಚಾರವೆಂದರೆ, ಭಾರತಿಯೇನೂ ಅನಾಗರಿಕಳಲ್ಲ. ಡಿಗ್ರಿ ಜತೆಗೆ ಬಿಇಡಿ ಸಹ ಮಾಡಿದ್ದು, ವಿದ್ಯಾವಂತ ಮಹಿಳೆ. ಆದರೆ, ಮೌಢ್ಯಕ್ಕೆ ಕಟ್ಟುಬಿದ್ದು ಇಂಥ ಕೃತ್ಯ ಎಸಗಿದ್ದಾಳೆ. ಸದ್ಯ ಆಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.