ಮನೆಯ ಪಕ್ಕದ ನೀರಿನ ಸಿಮೆಂಟ್ ತೊಟ್ಟಿಯಲ್ಲಿ ಅನುಮಾನಾಸ್ಪದವಾಗಿ ಎರಡು ವರ್ಷದ ಮಗುವಿನ ಮೃತದೇಹ ಪತ್ತೆಯಾಗಿದೆ. ಈಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರೇಚನಾಯ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.
ರಾಜಶೇಖರ ರೆಡ್ಡಿ ಹಾಗೂ ಕನ್ಯಾಕುಮಾರಿ ದಂಪತಿಯ ಮಗು ಲಲಿತ ರೆಡ್ಡಿ 2) ಮೃತ ದುರ್ದೈವಿ. ಮಗುವಿನ ತಾಯಿ ಹಾಗೂ ಅವರ ಅತ್ತೆ-ಮಾವನ ನಡುವೆ ಕೌಟುಂಬಿಕ ಕಲಹವಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ಕೊಡಲಾಗಿತ್ತು. ಅತ್ತೆ, ಸೊಸೆ, ಮಾವನ ನಡುವೆ ಅಷ್ಟಕ್ಕಷ್ಟೇ ಮಾತು ಇತ್ತು ಎನ್ನಲಾಗಿದೆ.
ಹೀಗಿದ್ದಾಗ ತಾಯಿ ಮಗುವನ್ನು ಮನೆಯಲ್ಲಿ ಅತ್ತೆ-ಮಾವನ ಜೊತೆ ಬಿಟ್ಟು ಜಮೀನಿನ ಬಳಿ ತೆರಳಿದ್ದಾಗ ಮನೆಯಲ್ಲಿದ್ದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ನೀರಿನ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಮಧ್ಯಾಹ್ನ ಜಮೀನಿನ ಬಳಿ ಇದ್ದ ಮಗುವನ್ನು ತಾತ ಲಾಲಿಪಾಪ್ ಕೊಡಿಸೋದಾಗಿ ಹೇಳಿ ಕರೆದುಕೊಂಡು ಹೋಗಿದ್ದ. ಇಷ್ಟು ದಿನ ಮಗುವನ್ನು ಮಾತನಾಡಿಸದ ತಾತ 3 ದಿನಗಳಿಂದ ಮಗುವಿಗೆ ಚಾಕ್ಲೇಟ್ ಕೊಡಿಸಿ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಾತನೇ ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಸಂಶಯ ಪೋಷಕರದ್ದಾಗಿದೆ. ಈ ಬಗ್ಗೆ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.