

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಮೀಪದಲ್ಲಿದ್ದ ವಿದ್ಯುತ್ ಕಂಬ ಮುರಿದಿದ್ದು, ಕಾಂಪೌಂಡ್ ಮತ್ತು ವಿದ್ಯುತ್ ಕಂಬಕ್ಕೆ ಹಾನಿಯಾಗಿ ಕಾರಿನಲ್ಲಿ ಪ್ರಯಾಣಿಸುತಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಕ ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ಸಂಭವಿಸಿದೆ.
ಕುಂದಾಪುರದಿಂದ ಮಡಿಕೇರಿಗೆ ತೆರಳುತ್ತಿದ್ದು, ಕುಂದಾಪುರ ಮೂಲದ ಪ್ರಯಾಣಿಕರಿದ್ದ ಕಾರು ಕೋಡಿ ತಿರುವಿನಲ್ಲಿ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ರವಿಪ್ರಕಾಶ್ ಬುಡ್ಲೆಗುತ್ತು ಅವರ ಕಾಂಪೌಂಡ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇದರ ಸಮೀಪವಿದ್ದ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎನ್ನಲಾಗಿದೆ.
ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರಿದ್ದು, ಅವರನ್ನು ಸ್ಥಳೀಯರಾದ ಸುಣ್ಣಮೂಲೆಯ ಹಸನ್ ಗೌಸಿಯ ಮತ್ತಿತರರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ.ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ವಿದ್ಯುತ್ ಕಂಬ ದುರಸ್ತಿ ಪಡಿಸಿದರೆಂದು ತಿಳಿದುಬಂದಿದೆ.