ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಕಾನ್ಸ್ಟೇಬಲ್ ಓರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಪೊಲೀಸ್ ಕ್ವಾರ್ಟರ್ಸ್ನಲ್ಲಿ ನಡೆದಿದೆ. ಕಾನ್ಸ್ಟೇಬಲ್ ಸೋಮಶೇಖರ್ (39) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಸಕಲೇಶಪುರದಲ್ಲಿ 112 ಪೊಲೀಸ್ ವಾಹನದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ ಅವರ ವಿರುದ್ಧ ಅವರ ಪತ್ನಿ ಡಿವೈಎಸ್ಪಿಗೆ ದೂರು ನೀಡಿದ್ದರು. ಸೋಮಶೇಖರ್ ವಿಪರೀತ ಕಿರುಕುಳ ನೀಡುತ್ತಾರೆ. ಅವರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಅವರು ಮನವಿ ಮಾಡಿದ್ದರು. ಹಿರಿಯ ಅಧಿಕಾರಿಗಳು ಕೂಡಾ ಸೋಮಶೇಖರ್ ಅವರನ್ನು ಕರೆದು ಬುದ್ಧಿವಾದ ಹೇಳಿದ್ದರು. ಮನೆಯ ವಿಚಾರವನ್ನು ಕಚೇರಿ ತಂದಿದ್ದರಿಂದ ಮನ ನೊಂದ ಸೋಮಶೇಖರ್ ಸಾವಿಗೆ ಶರಣಾಗಿದ್ದಾರೆ.
ಸೋಮಶೇಖರ್ ಪತ್ನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಸೋಮಶೇಖರ್ ವಿಪರೀತ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ. ಆತ್ಮಹತ್ಯೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಪತ್ನಿಯನ್ನೂ ಕರೆಸಿ ವಿಚಾರಣೆ ನಡೆಸಲಿದ್ದಾರೆ.