ವಿಟ್ಲ: ಸೈಂಟ್ ರೀಟಾ ವಿದ್ಯಾಸಂಸ್ಥೆಯ ಐದನೇ ತರಗತಿಯ ವಿದ್ಯಾರ್ಥಿ ಇಬ್ರಾಹಿಂ ರಿಷಾನ್ ನಿಗೆ ವಿಟ್ಲ ಶಾಲಾ ರಸ್ತೆಯಲ್ಲಿ ಮೂರುಸಾವಿರ ರೂಪಾಯಿ ಬಿದ್ದು ಸಿಕ್ಕಿತು. ಆತ ಆ ಮೊತ್ತವನ್ನು ಸೋದರ ರಿಯಾನ್ ಮತ್ತು ಗೆಳೆಯ ಸುಜಾನ್ ಗೆ ತೋರಿಸಿದನು. ಅವರೆಲ್ಲರೂ ಒಟ್ಟಾಗಿ ಪಕ್ಕದ ಆರಾಧನಾ ಮುದ್ರಣಾಲಯದ ಮಾಲಕ ವಿಜಯರಿಗೆ ಸಿಕ್ಕಿದ ಹಣವನ್ನು ನೀಡಿ ‘ರಸ್ತೆಯಲ್ಲಿ ಬಿದ್ದು ಸಿಕ್ಕಿತು, ಯಾರದ್ದೆಂದು ತಿಳಿಯದು” ಎಂದು ಪ್ರಾಮಾಣಿಕವಾಗಿ ಹೇಳಿದರು. ವಿಜಯರು ಪಕ್ಕದಲ್ಲಿರುವ ಸರಸ್ವತಿ ಸಹಕಾರಿ ಬ್ಯಾಂಕ್ ಶಾಖೆಯ ಸಿ.ಸಿ.ಟಿ.ವಿಯ ಫೂಟೇಜ್ ಮೂಲಕ ನೋಡಿದಾಗ ಮುತ್ತುರಾಜ್ ಎಂಬವರ ಜೇಬಿನಿಂದ ಹಣ ಬೀಳುತ್ತಿರುವುದನ್ನು ಗಮನಿಸಿದರು. ಮುತ್ತುರಾಜರನ್ನು ಕರೆಸಿ ಹಣ ಹಸ್ತಾಂತರಿಸಿದರು.
ಈ ಘಟನೆಯು ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕದ ಗಮನಕ್ಕೆ ಬರಲಾಗಿ ತಕ್ಷಣ ಕಾರ್ಯ ಪ್ರವೃತ್ತರಾದರು. ಹಣ ಹಿಂತಿರುಗಿಸಲು ಕಾರಣರಾದ ವಿದ್ಯಾರ್ಥಿಗಳನ್ನು ಮತ್ತು ಶಾಲೆಯನ್ನು ಗುರುತಿಸಿ ಪ್ರಾಂಶುಪಾಲ ಫಾದರ್ ಸುನಿಲ್ ಪ್ರವೀಣ್ ಪಿಂಟೋ ಇವರನ್ನು ಸಂರ್ಕಿಸಿದರು. ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು ಮತ್ತು ಉತ್ತಮವಾಗಿ ಸ್ಪಂದಿಸಿದ ವಿಜಯ್ ಇವರಿಗೆ ಶಾಲಾ ಎಸ್ಸೆಂಬ್ಲಿಯಲ್ಲಿ ಮುತ್ತುರಾಜ್ ಇವರ ಸಹಕಾರದೊಂದಿಗೆ ಪುಸ್ತಕ ಸ್ಮರಣಿಕೆ ಮತ್ತು ಸಿಹಿ ತಿಂಡಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಒಳ್ಳೆಯತನ ಮತ್ತು ಪ್ರಾಮಾಣಿಕತೆಯನ್ನು ಪ್ರಾಂಶುಪಾಲರು ಮನ ತುಂಬಿ ಹರಸಿದರು.
ಸ್ವಸ್ಥ ಸಮಾಜಕ್ಕಾಗಿ, “ಸಾಮಾಜಿಕ ಸ್ವಚ್ಛತಾ ಅಂದೋಲನ”ವನ್ನು ಅಲ್ಲಲ್ಲಿ ಸಂಘಟಿಸುತ್ತಿರುವ ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕವು ಜನರಲ್ಲಿರುವ ಜೀವನ ಮೌಲ್ಯಗಳು ಸಮಾಜಕ್ಕೆ ಆದರ್ಶವಾದುವುಗಳು. ಸದ್ಗುಣಗಳಿರುವ ಮಕ್ಕಳನ್ನು ಪಡೆದ ತಂದೆ ತಾಯಿಯರು ಧನ್ಯರೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.