ಮಂಗಳೂರು: ತನ್ನ ಮನೆಯ ಅಂಗಳದಲ್ಲೇ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಎಗರಿಸಿ ಪರಾರಿಯಾದ ಘಟನೆ ಮೂಲ್ಕಿ ಸಮೀಪದ ಬೆಳ್ಳಾಯರುನಲ್ಲಿ ನಡೆದಿದೆ.
ಕರಿಮಣಿ ಕಳೆಕೊಂಡವರನ್ನು ಬೆಳ್ಳಾಯರು ನಿವಾಸಿ ಸದಾಶಿವ ಶೆಟ್ಟಿ ಎಂಬವರ ಪತ್ನಿ ವಸಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ವಸಂತಿ ಶೆಟ್ಟಿಯವರ ಮನೆಯ ಅಂಗಳಕ್ಕೆ ಬಳಿ ಓರ್ವ ಅಪರಿಚಿತ ಬಂದು ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ, ಪೆಟ್ರೋಲ್ ತುಂಬಿಸಲು ಬಾಟಲಿ ಬೇಕು ಎಂದು ಹೇಳಿದ್ದಾನೆ. ಈ ಸಂದರ್ಭ ವಸಂತಿ ಶೆಟ್ಟಿ ನೀರಿನ ಖಾಲಿ ಬಾಟಲಿ ಕೊಟ್ಟಿದ್ದು ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ
ಸ್ವಲ್ಪ ಸಮಯದ ಬಳಿಕ ಮತ್ತೆ ಅದೇ ವ್ಯಕ್ತಿ ಬಂದು ಬೇರೆ ಬಾಟಲಿ ಕೇಳಿದ್ದು, ವಸಂತಿ ಶೆಟ್ಟಿ ಅವರು ಮನೆಯ ಹೊರಗಡೆ ಬಂದಾಗ ಮೂವರು ದುಷ್ಕರ್ಮಿಗಳು ಮನೆಯ ಅಂಗಳದಲ್ಲಿ ಕುತ್ತಿಗೆಯ ಬದಿ ಎರಡು ಚೂರಿಯಿಂದ ಬೆದರಿಸಿ ಕರಿಮಣಿ ಸರವನ್ನು ಎಳೆದಿದ್ದಾರೆ.
ಆಗ ವಸಂತಿ ಶೆಟ್ಟಿ ಜೋರಾಗಿ ಬೊಬ್ಬೆ ಹಾಕಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಸಂದರ್ಭ ಕರಿಮಣಿ ಸರದ ಒಂದು ತುಂಡು ಸ್ಥಳದಲ್ಲಿ ಬಿದ್ದಿದೆ. ಸುಮಾರು ಐದು ಪವನ್ ಚಿನ್ನದ ಕರಿಮಣಿ ಸರ ಎಂದು ವಸಂತಿ ಶೆಟ್ಟಿ, ಮುಲ್ಕಿ ಪೊಲೀಸರಿಗೆ ನೀಡುವ ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ರಾಷ್ಟ್ರೀಯ ಹೆದ್ದಾರಿ ಕೋಲ್ನಾಡ್ ಚಂದ್ರ ಮೌಳೀಶ್ವರ ಕ್ರಾಸ್ ಬಸ್ ನಿಲ್ದಾಣದ ಬಳಿ ಪಾರ್ಕಿಂಗ್ ಮಾಡಿದ್ದ ಬೆಳ್ಳಾಯರು ನಿವಾಸಿ ಸೂರ್ಯಪ್ರಕಾಶ್ ಭಟ್ ಎಂಬವರ ಬೈಕ್ ಸ್ಥಳದಿಂದ ನಾಪತ್ತೆಯಾಗಿದ್ದು ದುಷ್ಕರ್ಮಿಗಳು ಸರ ಎಗರಿಸಿ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಡಿಸಿಪಿ ಕ್ರೈಂ ದಿನೇಶ್ ಕುಮಾರ್, ಎಸಿಪಿ ಮನೋಜ್ ಕುಮಾರ್ ಸುರತ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಮುಲ್ಕಿಎಸ್ಐ ವಿನಾಯಕ ಬಾವಿಕಟ್ಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.