
ಜಡಚೇರ್ಲ: ತೆಲಂಗಾಣದ ಜಡಚೇರ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರ ದೇಹವನ್ನು ಕಚ್ಚಿ ತಿಂದ ಆಘಾತಕಾರಿ ಘಟನೆ ನಡೆದಿದೆ.

ಇದು ಆಸ್ಪತ್ರೆಯ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಗಂಭೀರ ಲೋಪವನ್ನು ಬಹಿರಂಗಪಡಿಸಿದೆ.ಈ ಘಟನೆ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಜಡಚೇರ್ಲ ಮಂಡಲದ ನಾಗಸಾಲಾ ಗ್ರಾಮದ ಲಾರಿ ಚಾಲಕ ಪೋಲೆ ಭೀಮೇಶ್ವರ್ (32) ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿತ್ತು.ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ಮೃತದೇಹವನ್ನು ನೆಲದ ಮೇಲೆ ಇರಿಸಲಾಗಿತ್ತು. ಬೀದಿ ನಾಯಿಯೊಂದು ಶವಾಗಾರದ ಒಳಗೆ ಪ್ರವೇಶಿಸಿದೆ ಹಾಗೂ ಮೃತದೇಹದ ಕೈಯನ್ನು ಕಚ್ಚಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನಂತರ ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಮರಣೋತ್ತರ ಪರೀಕ್ಷೆಯ ಸಿಬ್ಬಂದಿ ಆಗಮಿಸಿದಾಗ ನಾಯಿ ಓಡಿತು. ಆಸ್ಪತ್ರೆಯ ಸಿಬ್ಬಂದಿ ನಾಯಿಯನ್ನು ದೂರ ಓಡಿಸಿದರು ಎಂದು ಆಸ್ಪತ್ರೆಯ ಅಧೀಕ್ಷಕರಾದ ಚಂದ್ರಕಲಾ ಅವರು ತಿಳಿಸಿದ್ದಾರೆ.










