ಬಂಟ್ವಾಳ : ಪಾಣೆಮಂಗಳೂರು ಸಮೀಪದ ಬೊಂಡಾಲ-ಶಾಂತಿಗುಡ್ಡೆ ಅಂಗನವಾಡಿಗೆ ನುಗ್ಗಿದ ಕಳ್ಳರು ಅಲ್ಯುಮಿನಿಯಂ ಕುಕ್ಕರುಗಳ ಸಹಿತ ನಗದು ಹಣ ಲಪಟಾಯಿಸಿದ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಅಂಗನವಾಡಿ ಕಾರ್ಯಕರ್ತೆ ದೇವಕಿ ಅವರು ಬುಧವಾರ ಮೀಟಿಂಗಿಗೆ ತೆರಳಿದ್ದು, ಸಹಾಯಕಿ ವಿಜಯಶ್ರೀ ಅವರು ಬುಧವಾರ ದಿನವಿಡೀ ಅಂಗನವಾಡಿಯಲ್ಲಿದ್ದು ಸಂಜೆ ಅಂಗನವಾಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಗುರುವಾರ ಬೆಳಿಗ್ಗೆ ಅಂಗನವಾಡಿ ಸಹಾಯಕಿ ವಿಜಯಶ್ರೀ ಅಂಗನವಾಡಿಗೆ ಬಂದಾಗ ಅಂಗನವಾಡಿಯ ಬೀಗ ಮುರಿದು ಬೀಗ ತೆರೆದಿತ್ತು. ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಯಾರೋ ಕಳ್ಳರು ಅಂಗನವಾಡಿಯ ಬೀಗ ಮುರಿದು ಸುಮಾರು ಎರಡೂವರೆ ಸಾವಿರ ರೂಪಾಯಿ ಮೌಲ್ಯದ 10 ಲೀಟರ್ ಹಾಗೂ 5 ಲೀಟರಿನ ಎರಡು ಅಲ್ಯುಮಿನಿಯಂ ಕುಕ್ಕರುಗಳು, 3 ಸಾವಿರ ರೂಪಾಯಿ 2 ಅಲ್ಯುಮಿನಿಯಂ ಡಬ್ಬ ಹಾಗೂ ಮುಚ್ಚಳ, 1 ಸಾವಿರ ರೂಪಾಯಿ ನಗದು ಹಣ ಹಾಗೂ ಅಂಗನವಾಡಿಯಲ್ಲಿದ್ದ ದಿನಸಿ ಸಾಮಾಗ್ರಿಗಳನ್ನು ಕಳವುಗೈದಿರುವುದು ಕಂಡು ಬಂದಿದೆ. ಘಟನೆ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 134/2023 ಕಲಂ: 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.