ತಿರುಮಲ: ದೇಶದಾದ್ಯಂತ ಕೊರೋನಾ ಎರಡನೇ ಅಲೆ ಅಬ್ಬರ ಹೆಚ್ಚುತ್ತಿರುವ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಲಾಗಿದೆ.
ದೇಗುಲದಲ್ಲಿನ ಸರ್ವ ದರ್ಶನದ ದೈನಂದಿನ ಟೋಕನ್ ವಿತರಣೆಯನ್ನು 22 ಸಾವಿರದಿಂದ 15 ಸಾವಿರಕ್ಕೆ ಇಳಿಸುತ್ತಿದ್ದು, ಆನ್ಲೈನ್ ವಿಶೇಷ ದರ್ಶನ ಟಿಕೆಟ್ಗಳನ್ನೂ ತಗ್ಗಿಸಲಾಗುವುದೆಂದು ಟಿಟಿಡಿ ನಿರ್ವಹಣಾ ಸಮಿತಿ ಹೇಳಿದೆ. ದೇಗುಲ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ.
ಎಲ್ಲಾ ವಾಹನಗಳನ್ನು ಅಲಿಪಿರಿಯಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗಿದ್ದು, ದಿನನಿತ್ಯ ಸುಮಾರು ಒಂದು ಸಾವಿರದ ಸಮೀಪ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ನಿರ್ಬಂಧ ಹೇರುವ ಕ್ರಮ ಕೈಗೊಂಡಿರುವುದಾಗಿ ಟಿಟಿಡಿ ಮಂಡಳಿ ತಿಳಿಸಿದೆ..
ಆಂಧ್ರದ ತಿರುಪತಿ, ಶ್ರೀಕಾಳಹಸ್ತಿ, ಕನಿಪಕ್ಕಂ ದೇಗುಲಗಳಿರುವ ಚಿತ್ತೂರು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಭಕ್ತರು ಮಾಸ್ಕ್ ಧರಿಸಿರಲೇಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜ್ವರ, ಕೆಮ್ಮು ಹಾಗೂ ಶೀತ ಇರುವವರು ದೇಗುಲಕ್ಕೆ ಬರದಂತೆ ನಿರ್ಬಂಧ ವಿಧಿಸಲಾಗಿದೆ. ಕಳೆದ ಬೇಸಿಗೆಯಲ್ಲಿ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ತಿರುಪತಿ ದೇಗುಲವನ್ನು ಮೂರು ತಿಂಗಳ ಕಾಲ ಮುಚ್ಚಲಾಗಿತ್ತು.