ನವದೆಹಲಿ: ಗುಜರಾತ್ನ ಕೆವಾಡಿಯಲ್ಲಿ ಉನ್ನತ ಮಟ್ಟದ ಸೇನಾ ಸಭೆ ನಡೆಯುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಇದೇ ಮೊದಲ ಬಾರಿಗೆ ಸೈನಿಕರೂ ಭಾಗಿಯಾಗುತ್ತಿದ್ದಾರೆ.
ಮಾರ್ಚ್ 6 ರಂದು ಪ್ರಧಾನಿ ಮೋದಿ ಸಮ್ಮುಖದಲ್ಲಿ ಪ್ರೆಸೆಂಟೇಶನ್ ನಡೆಯಲಿದೆ. ಗಡಿಯ ವಸ್ತುಸ್ಥಿತಿ, ಥಿಯೇಟರ್ ಕಮಾಂಡ್ ಬೆಳವಣಿಗೆ ಬಗ್ಗೆ ಪ್ರೆಸೆಂಟೇಶನ್ ನಡೆಯಲಿದೆ. ಬಳಿಕ ಸೈನಿಕರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಮಹತ್ವದ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರು ಸೇನಾ ಪ್ರಮುಖರು, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಕೂಡ ಭಾಗಿಯಾಗಲಿದ್ದಾರೆ.
ಇಲ್ಲಿಯವರೆಗೆ ಜಂಟಿ ಕಮಾಂಡರ್ಗಳ ಸಮ್ಮೇಳನದಲ್ಲಿ ಕಮಾಂಡರ್-ಇನ್-ಚೀಫ್ ಹುದ್ದೆಯ ಅಧಿಕಾರಿಗಳು ಮಾತ್ರ ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಯೋಧರೂ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಈ ಸಭೆಯು ಸೈನ್ಯ ಮತ್ತು ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದಾಗಿದೆ. ಇಂತಹ ಸಭೆಗಳಲ್ಲಿ ಶತ್ರುಗಳ ವಿರುದ್ಧ ಯೋಧರು ಹೇಗೆ ಕಾರ್ಯಾಚರಣೆ ಮಾಡಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ.
ಕಳೆದ ಒಂದು ವರ್ಷದಿಂದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಂಟಾಗಿದ್ದು, ಈ ಸಂದರ್ಭದಲ್ಲಿ ಚೀನಾಗೆ ಪ್ರತಿರೋಧವಡ್ಡಲು ಹಿಂದೆ ನಡೆದ ಸಭೆಗಳು ಸಹಾಯಕವಾಗಿದ್ದವು ಎಂದು ಹೇಳಲಾಗಿದೆ. ವಿಶೇಷ ಎಂದರೆ ಈ ಬಾರಿಯ ಸಭೆಯು ಗುಜರಾತ್ನ ಕೆವಾಡಿಯಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ಮುಂದೆ ನಡೆಯುತ್ತಿದೆ.