ಬಟ್ಟೆ ತೊಳೆಯಲು ತೆರಳಿದ್ದ ವೇಳೆ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ನಡೆದಿದೆ.
ಗೀತಾ ಹೊನ್ನೂರ(38), ಶೋಭಿತಾ (12), ವಾಸುದೇವ(10) ಮೃತಪಟ್ಟ ದುರ್ದೈವಿಗಳು. ತಾಯಿ ಗೀತಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಬಟ್ಟೆ ತೊಳೆಯಲೆಂದು ಭೀಮಾ ನದಿ ತೀರಕ್ಕೆ ಹೋಗಿದ್ದರು. ಬಟ್ಟೆ ತೊಳೆಯುತ್ತಿದ್ದಾಗ ಮಕ್ಕಳಿಬ್ಬರೂ ಅಲ್ಲೇ ತೀರದಲ್ಲಿ ಆಟವಾಡುತ್ತಿದ್ದರು. ವಾಸುದೇವ ಆಟವಾಡುತ್ತಾ ನದಿಗೆ ಇಳಿದಿದ್ದಾನೆ. ಹಾಗೆ ಇಳಿದವನು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ನೋಡುತ್ತಿದ್ದ ಅಕ್ಕ ಶೋಭಿತಾ ತಮ್ಮನನ್ನು ನೀರಿನಿಂದ ಮೇಲೆ ಎಳೆಯಲು ಹೋಗಿದ್ದಾಳೆ. ಆಗ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
ತನ್ನ ಮಕ್ಕಳಿಬ್ಬರೂ ನೀರಿನಲ್ಲಿ ಮುಳುಗೇಳುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲೆಂದು ತಾಯಿ ಗೀತಾ ಅವರು ಕೂಡಾ ನೀರಿಗೆ ಧುಮುಕಿದ್ದಾರೆ. ಆದರೆ ಆಕೆಗೆ ಈಜು ಗೊತ್ತಿರಲಿಲ್ಲ. ನೀರಿನಲ್ಲಿ ಮುಳುಗೇಳುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಆಕೆ ಕೂಡಾ ಮುಳುಗಿದ್ದಾರೆ.
ಪುಟ್ಟ ಮಕ್ಕಳು ಮತ್ತು ತಾಯಿಯನ್ನು ಕಳೆದುಕೊಂಡ ಕುಟುಂಬ ಮತ್ತು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.