Wednesday, July 22, 2026
spot_imgspot_img
spot_imgspot_img

ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ರೈಲು; 8 ಆನೆಗಳು ಸಾವು

- Advertisement -
- Advertisement -

ಗುವಾಹಟಿ: ಇಂದು ಮುಂಜಾನೆ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಾಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿವೆ. ಅಪಘಾತದಲ್ಲಿ ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್, ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಿನ ಜಾವ ಸುಮಾರು 2.17ರ ವೇಳೆಗೆ ಹೊಜೈ ಜಿಲ್ಲೆಯ ಚಾಂಗ್ಜುರೈ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ನಾಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಶ್ ಕದಮ್ ತಿಳಿಸಿದ್ದಾರೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಕದಮ್ ಸೇರಿದಂತೆ ಅರಣ್ಯ ಹಾಗೂ ರೈಲ್ವೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಜಮುನಾಮುಖ್-ಕಂಪೂರ್ ವಿಭಾಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಕೆಲವು ರೈಲುಗಳನ್ನು ಯುಪಿ ಮಾರ್ಗದ ಮೂಲಕ ತಿರುಗಿಸಲಾಗಿದ್ದು, ಹಳಿ ಪುನಃಸ್ಥಾಪನೆ ಕಾರ್ಯ ತೀವ್ರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಯಿರಾಂಗ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಮಿಜೋರಾಂನ ಸಾಯಿರಾಂಗ್ (ಐಜ್ವಾಲ್ ಸಮೀಪ) ಮತ್ತು ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ನಡುವಿನ ಪ್ರಮುಖ ರೈಲು ಸಂಪರ್ಕವಾಗಿದೆ. ಅಪಘಾತ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿಲೋಮೀಟರ್ ದೂರದಲ್ಲಿದೆ. ಘಟನೆ ಬಳಿಕ ಅಪಘಾತ ಪರಿಹಾರ ರೈಲುಗಳು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿವೆ.

ಹಳಿಗಳ ಮೇಲೆ ಆನೆಗಳ ದೇಹದ ಭಾಗಗಳು ಚದುರಿದ್ದರಿಂದ ಹಾಗೂ ಬೋಗಿಗಳು ಹಳಿ ತಪ್ಪಿದ್ದರಿಂದ ಅಸ್ಸಾಂ ಮತ್ತು ಈಶಾನ್ಯದ ಹಲವು ಭಾಗಗಳಿಗೆ ರೈಲು ಸೇವೆಗಳು ಬಾಧಿತವಾಗಿವೆ. ಪರಿಣಾಮ ಬೀರಿದ ಬೋಗಿಗಳ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ರೈಲಿನ ಇತರ ಬೋಗಿಗಳಲ್ಲಿನ ಖಾಲಿ ಬರ್ತ್‌ಗಳಿಗೆ ಸ್ಥಳಾಂತರಿಸಲಾಗಿದೆ.

ರೈಲು ಗುವಾಹಟಿ ತಲುಪಿದ ನಂತರ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಿ, ನಂತರ ಮುಂದಿನ ಪ್ರಯಾಣವನ್ನು ಪುನರಾರಂಭಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳವು ಆನೆ ಕಾರಿಡಾರ್ ಅಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಹಳಿಗಳ ಮೇಲೆ ಆನೆಗಳ ಹಿಂಡು ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದರೂ, ವೇಗದ ಕಾರಣದಿಂದ ಡಿಕ್ಕಿ ತಪ್ಪಿಸಲಾಗಲಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

- Advertisement -

Related news

error: Content is protected !!