ಮಂಗಳೂರು: ತುಳುನಾಡಿನ ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ, ಮೊದಲಾದ ಧಾರ್ಮಿಕ ಕಾರ್ಯಕ್ಕೆ ಅನುಮತಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ಉಡುಪಿ ಶಾಸಕ ರಘುಪತಿ ಭಟ್ ಈ ಹಿಂದೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 100 ಜನರ ಮಿತಿಯಲ್ಲಿ ತುಳುನಾಡಿನಲ್ಲಿ ಧಾರ್ಮಿಕ ಕಾರ್ಯ ನಡೆಸಲು ಅನುಮತಿ ನೀಡಿ ಮುಖ್ಯಕಾರ್ಯದರ್ಶಿಯವರಿಗೆ ಆದೇಶಿಸಿದ್ದು, ಈ ಆದೇಶ ಇನ್ನಷ್ಟೇ ಜಾರಿಗೆ ಬರಬೇಕಿದೆ.
ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ, ಮೊದಲಾದ ತುಳುನಾಡಿನ ಧಾರ್ಮಿಕ ಆಚರಣೆಗಳನ್ನು ನಡೆಸಲು ನಾನು ಈ ಹಿಂದೆಯೇ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿರುವಂತೆ ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದು, ತಕ್ಷಣ ಜಾರಿಗೆ ತರಲು ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಆಗ್ರಹಿಸುತ್ತೇನೆ. @csogok @BSYBJP pic.twitter.com/mGgNMlyCij
— MLA Raghupathi Bhat BJP (@RaghupathiBhat) August 28, 2020
ಕೋವಿಡ್-19 ನಿಂದಾಗಿ ದೇಶದಾದ್ಯಂತ ಆದ ಲಾಕ್ಡೌನ್ನಿಂದಾಗಿ ಜನರ ಸಾಮಾಜಿಕ, ಧಾರ್ಮಿಕ ಆಚರಣೆಗೂ ಧಕ್ಕೆ ಉಂಟಾಗಿರುತ್ತದೆ. ಹಾಗೆಯೇ ಉಡುಪಿ ಜಿಲ್ಲೆಯ ತುಳುನಾಡಿನ ಸಂಸ್ಕೃತಿಯಂತೆ ವರ್ಷಂಪ್ರತಿ ದೈವ ನೇಮೋತ್ಸವ, ಮಾರಿಪೂಜೆ, ನಾಗಾರಾಧನೆ ಮುಂತಾದ ಧಾರ್ಮಿಕ ಸೇವಾ ಕೈಂಕರ್ಯಗಳು ನಡೆಯುತ್ತಲಿರುವುದು ಸರ್ವವಿಧಿತ. ಆದರೆ ಈ ಬಾರಿ ಲಾಕ್ ಡೌನ್ ನಿಂದಾಗಿ ಧಾರ್ಮಿಕ ಸೇವೆಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ನಿಷೇಧವಿದ್ದುದರಿಂದ ಧಾರ್ಮಿಕ ಭಾವನೆಗೆ ಘಾಸಿ ಉಂಟಾಗಿದ್ದಲ್ಲದೇ ದೈವ ಪರಿಚಾರಕರಾದ ನಾಗಸ್ವರ ವಾದಕರು, ಮಡಿವಾಳ, ದರ್ಶನಪಾತ್ರಿ, ಮದ್ಯಸ್ಥರು, ಗರೋಡಿ ವರ್ಗದವರು, ನಲಿಕೆ ವರ್ಗ, ಪಂಬದ ವರ್ಗದವರು ಸೇರಿದಂತೆ ಹಲವಾರು ವರ್ಗದವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ.
ಆದುದರಿಂದ ತುಳುನಾಡಿನ ದೈವರಾಧನೆ, ಮುಂತಾದ ಧಾರ್ಮಿಕ ಕೈಂಕರ್ಯ ನಡೆಸಲು 100 ಜನ ಮೀರದಂತೆ ನಡೆಸಲು ಅವಕಾಶ ನೀಡಬೇಕೆಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ರಘುಪತಿ ಭಟ್ ಮನವಿ ಸಲ್ಲಿಸಿದ್ದರು. ಅಲ್ಲದೇ ದೈವ ಪರಿಚಾಕರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲು ತಲಾ 10 ಸಾವಿರ ಅನುದಾನ ಮಂಜೂರು ಮಾಡುವಂತೆ ಮನವಿಯಲ್ಲಿ ಕೋರಿದ್ದರು.