ಮಂಗಳೂರು (ನ.25) : ಹಣದ ಆಸೆಗೆ ಬಿದ್ದ ಯುವಕರು, ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಜನರಿಗೆ ವಂಚಿಸಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇವರು ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಹಲವರನ್ನು ಪರಿಚಯ ಮಾಡಿಕೊಂಡು ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಒಂದು ವೇಳೆ ಹಣ ನೀಡದಿದ್ದರೆ, ಪೊಲೀಸ್ ಕಮಿಷನರ್ ಹೆಸರಿನಲ್ಲಿ ಅವರಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಇದೇ ರೀತಿ ಹಲವು ಜನರಿಗೆ ಮೋಸ ಮಾಡಿದ ಈ ಯುವಕರು ಲಕ್ಷ ಲಕ್ಷ ಹಣ ದೋಚಿದ್ದಾರೆ. ಬೆಂಗಳೂರು ಮೂಲದ ಗೋಕಲ್ ರಾಜ್. ಪವನ್ ಬಂಧಿತ ಯುವಕರು.
ಸಾಕ್ಷಿ ರಾಜ್‘ ಎನ್ನುವ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಇವರಿಬ್ಬರು ಸೇರಿ ಸೃಷ್ಟಿಸಿದ್ದರು. ಈ ಖಾತೆಯಲ್ಲಿ ಸುಂದರ ಹುಡುಗಿಯ ಫೋಟೋ ನೋಡಿ ಅನೇಕರು ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಅಲ್ಲದೇ ಇವರು ಕೂಡ ಅನೇಕರಿಗೆ ರಿಕ್ವೆಸ್ ಕಳುಹಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಚಾಟಿಂಗ್ ನಡಿಸಿ, ಬೆತ್ತಲೆ ಫೋಟೋವನ್ನು ಕಳುಹಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಫೇಸ್ಬುಕ್ ಫ್ರೆಂಡ್ನಿಂದ ಕೂಡ ಬೆತ್ತಲೆ ಫೋಟೋ ಪಡೆಯುತ್ತಿದ್ದರು. ಈ ಫೋಟೋ ಸಿಕ್ಕ ಬಳಿಕ ಅವರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇಲ್ಲದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹರಿಯಬಿಡುವ ಬೆದರಿಕೆ ಹಾಕುತ್ತಿದ್ದರು. ಈ ಮೂಲಕ ಅನೇಕರಿಂದ ಇವರು ಲಕ್ಷ ಲಕ್ಷ ಹಣ ದೋಚುತ್ತಿದ್ದರು.
ಮಂಗಳೂರಿನ ಉದ್ಯಮಿಯೊಬ್ಬರಿಗೆ ಸಾಕ್ಷಿ ರಾಜ್ ಹೆಸರಿನಲ್ಲಿ ಮೆಸೇಜ್ ಮಾಡಿದ್ದಾರೆ. ಬೆತ್ತಲೆ ಫೋಟೊ ಕಳುಹಿಸಿ ಉದ್ಯಮಿಯ ಬೆತ್ತಲೆ ಫೋಟೊ ಸೆಂಡ್ ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ ಇನ್ನು ಮಂಗಳೂರು ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಎಂದು ಅವರಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಸಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಬಂಧಿಸಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಬೆದರಿದ ಉದ್ಯಮಿ ಹಣ ನೀಡಿದ್ದಾರೆ. ಇದಾದ ಬಳಿಕ ಮತ್ತೆ ಮತ್ತೆ ಹಣದ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೆಸತ್ತ ಉದ್ಯಮಿ ಕದ್ರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮಹಿಳೆ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು, ಖಾಸಗಿ ಫೋಟೋಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಮಂಗಳೂರು ಸೈಬರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ ತಮ್ಮ ನಗ್ನ ಫೋಟೋ ಕಳುಹಿಸಿದ ಬಳಿಕ, ಈ ಫೋಟೋಗಳನ್ನು ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರು ಹಣ ನೀಡದಿದ್ದಾಗ ನಾವು ಹಿರಿಯ ಪೊಲೀಸ್ ಅಧಿಕಾರಿಗಳೆಂದು ಬೆದರಿಸಿದ್ದಾರೆ. ಈ ಬಗ್ಗೆ ರಾಜೇಶ್ ಸೈಬರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.