

ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟ ಘಟನೆ ಮೈಸೂರಿನ ಶ್ರೀರಂಗಪಟ್ಟಣದ ಗಂಜಾಮ್ ಸಮೀಪದ ನಿಮಿಷಾಂಭ ದೇಗುಲ ಬಳಿ ಘಟನೆ ನಡೆದಿದೆ.
ಮೃತಪಟ್ಟವರನ್ನು ವಿಶಾಲ್ (19), ರೋಹಣ್ (17) ಎಂದು ಗುರುತಿಸಲಾಗಿದೆ.
ಕಾವೇರಿ ನದಿಯಲ್ಲಿ ವಿಶಾಲ್ ಹಾಗೂ ರೋಹಣ್ ಈಜಲು ಹೋದ ಈ ದುರ್ಘಟನೆ ನಡೆದಿದೆ. ಬೆಂಗಳೂರು ಮತ್ತು ತಮಿಳುನಾಡು ಮೂಲದ ಯುವಕರು ಮೈಸೂರಿನ ಅಜ್ಜಿ ಮನೆಗೆ ಬಂದಿದ್ದರು. ಕುಟುಂಬಸ್ಥರ ಜತೆ ನಿಮಿಷಾಂಭ ದೇಗುಲಕ್ಕೆ ಬಂದಿದ್ದರು.
ಈ ವೇಳೆ ಈಜಲು ಬಾರದೆ ಇದ್ದರೂ ನೀರಿಗೆ ಇಳಿದಿದ್ದಾರೆ. ಆದರೆ ಕಳೆದೊಂದು ವಾರದಿಂದ ಸುರಿದ ಮಳೆಗೆ ನೀರಿನ ಪ್ರಮಾಣ ಹೆಚ್ಚಾಗಿತ್ತು. ನೀರಿನ ರಭಸಕ್ಕೆ ಯುವಕರಿಬ್ಬರು ಕೊಚ್ಚಿ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಸ್ಥಳೀಯ ಈಜುಗಾರರ ನೆರವಿನಿಂದ ಶವಗಳನ್ನು ಮೇಲೆಕ್ಕೆತ್ತಿಸಿದ್ದಾರೆ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಜ್ಜಿ ಮನೆಗೆಂದು ಬಂದವರು ವಾಪಸ್ ಹೆಣವಾಗಿ ಹೋಗಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.